ಚಾಮರಾಜನಗರ: ಇಲ್ಲಿನ ಭುವನೇಶ್ವರಿ ವೃತ್ತದ ಬಳಿಯ ವೆಂಕಟೇಶ್ವರ ಸರ್ವೀಸ್ ಸೆಂಟರ್ ಪೆಟ್ರೋಲ್ ಬಂಕ್ನಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡು, ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಸುಟ್ಟುಹೋಗಿದೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅಪಾಯ ತಪ್ಪಿಸಿದರು. ಪೊಲೀಸ್ ಕಾನ್ಸ್ಟೆಬಲ್ ವಸಂತ್ ಕುಮಾರ್, ಪತ್ನಿ ಪಲ್ಲವಿ ಅವರಿಗೆ ಗಾಯಗಳಾಗಿವೆ.
ವಸಂತ್ ಕುಮಾರ್ ಪೆಟ್ರೋಲ್ ತುಂಬಿಸಿಕೊಂಡ ನಂತರ ಬೈಕ್ ಚಲಾಯಿಸಲು ಮುಂದಾಗಿದ್ದಾರೆ. ಈ ವೇಳೆ ಪೆಟ್ರೋಲ್ ಪಂಪ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣವೇ ಭಯದಲ್ಲಿ ಬೈಕ್ ಬಿಟ್ಟು ಹೊರಗಡೆ ಓಡಿದ್ದಾರೆ. ಬೈಕ್ ಸುಟ್ಟು ಕರಕಲಾಗಿದೆ.
ಮೊಬೈಲ್ ಬಳಕೆ ಅವಘಡಕ್ಕೆ ಕಾರಣವೇ?: ಪೆಟ್ರೋಲ್ ತುಂಬಿಸಿಕೊಳ್ಳಲು ಗ್ರಾಹಕರೊಬ್ಬರು ಬೈಕ್ ನಿಲ್ಲಿಸಿದ್ದಾರೆ. ಈ ಸಮಯದಲ್ಲಿ ಮೊಬೈಲ್ ರಿಂಗ್ ಆಗಿದೆ. ಸಿಬ್ಬಂದಿ ಕರೆ ಸ್ವೀಕರಿಸದಂತೆ ಸೂಚಿಸಿದರೂ ಗ್ರಾಹಕರು ಕರೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪೆಟ್ರೋಲ್ ಪಂಪ್ನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು, ತಕ್ಷಣ ಹೊತ್ತಿ ಉರಿದಿದೆ. ಕೂಡಲೇ ಗ್ರಾಹಕರು ಹಾಗೂ ನಾವು ಹೊರಬಂದೆವು ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.