ADVERTISEMENT

ಪಿಲಿಕುಳ ನಿಸರ್ಗಧಾಮದಲ್ಲಿ ನಾಯಿ ದಾಳಿ: 10 ಕಾಡು ಕುರಿ ಸಾವು

ಪಿಲಿಕುಳ ನಿಸರ್ಗಧಾಮದಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 10:42 IST
Last Updated 26 ಜೂನ್ 2020, 10:42 IST
ಮಂಗಳೂರು ಪಿಲಿಕುಳ ನಿಸರ್ಗಧಾಮ (ಸಾಂದರ್ಭಿಕ ಚಿತ್ರ)
ಮಂಗಳೂರು ಪಿಲಿಕುಳ ನಿಸರ್ಗಧಾಮ (ಸಾಂದರ್ಭಿಕ ಚಿತ್ರ)   

ಮಂಗಳೂರು: ನಗರದ ಹೊರ ವಲಯದಲ್ಲಿರುವ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗ ಧಾಮದ ಪ್ರಾಣಿ ಸಂಗ್ರಹಾಲಯದೊಳಕ್ಕೆ ಗುರುವಾರ ತಡರಾತ್ರಿ ನಾಯಿಗಳು ದಾಳಿ ನಡೆಸಿ ಹತ್ತು ಕಾಡು ಕುರಿಗಳನ್ನು ಕೊಂದು ಹಾಕಿವೆ. ಐದು ಕಾಡು ಕುರಿಗಳಿಗೆ ಗಾಯಗಳಾಗಿವೆ.

ನಿಸರ್ಗ ಧಾಮದಲ್ಲಿ 40 ಕಾಡು ಕುರಿಗಳಿದ್ದವು. ಅವುಗಳನ್ನು ಒಂದೇ ಕಡೆ ಇರಿಸಲಾಗಿತ್ತು. ಸಮೀಪದ ಜನವಸತಿ ಪ್ರದೇಶಗಳಿಂದ ಐದು ನಾಯಿಗಳು ನಿಸರ್ಗಧಾಮದ ಒಳಕ್ಕೆ ನುಗ್ಗಿವೆ. ಕಾಡು ಕುರಿಗಳಿರುವ ಪ್ರದೇಶ ಪ್ರವೇಶಿಸಿ ದಾಳಿ ಮಾಡಿವೆ.

ಶುಕ್ರವಾರ ಬೆಳಿಗ್ಗೆ 7.30ರ ಸುಮಾರಿಗೆ ನಿಸರ್ಗ ಧಾಮದ ಸಿಬ್ಬಂದಿ ಕರ್ತವ್ಯಕ್ಕೆ ಬಂದ ಬಳಿಕವೇ ದುರ್ಘಟನೆ ನಡೆದ ವಿಷಯ ಗೊತ್ತಾಗಿದೆ.

ADVERTISEMENT

ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಡಾ.ಜಯಪ್ರಕಾಶ್ ಭಂಡಾರಿ, 'ನಿಸರ್ಗಧಾಮದ ಕಾಂಪೌಂಡ್ ಮೇಲೆ ಒಂದು ಕಡೆ ಮರ‌ ಬಿದ್ದಿದೆ. ಅಲ್ಲಿಂದ ನಾಯಿಗಳು ಒಳಕ್ಕೆ ಬಂದಿವೆ. ಐದು ನಾಯಿಗಳನ್ನು ಸೆರೆಹಿಡಿದು ಸ್ಥಳಾಂತರಿಸಲಾಗಿದೆ' ಎಂದರು. ಪಿಲಿಕುಳದಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಗಾಯಗೊಂಡಿರುವ ಕಾಡು ಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.