ADVERTISEMENT

‘ಸೈಬರ್, ಡ್ರಗ್ಸ್‌ ಮೇಲೆ ನಿಗಾ; ಪ್ರತಿ ಜಿಲ್ಲೆಯಲ್ಲೂ ‘ಸಿಇಎನ್‌’

ಪೊಲೀಸ್ ಸಂಸ್ಮರಣ ದಿನಾಚರಣೆ; ಹುತಾತ್ಮರಿಗೆ ಮುಖ್ಯಮಂತ್ರಿ ನಮನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 19:19 IST
Last Updated 21 ಅಕ್ಟೋಬರ್ 2019, 19:19 IST
ಹುತಾತ್ಮ ಪೊಲೀಸ್‌ ಸ್ಮಾರಕಕ್ಕೆ ನಟ ಪುನೀತ್ ರಾಜ್‌ಕುಮಾರ್ ಅವರು ಹೂಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು – ಪ್ರಜಾವಾಣಿ ಚಿತ್ರ
ಹುತಾತ್ಮ ಪೊಲೀಸ್‌ ಸ್ಮಾರಕಕ್ಕೆ ನಟ ಪುನೀತ್ ರಾಜ್‌ಕುಮಾರ್ ಅವರು ಹೂಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹೆಚ್ಚುತ್ತಿರುವ ಸೈಬರ್ ಅಪರಾಧ ಹಾಗೂ ಮಾದಕ ವಸ್ತು ಜಾಲದ ಮೇಲೆ ನಿಗಾ ವಹಿಸಿ ಆರೋಪಿಗಳನ್ನು ಮಟ್ಟಹಾಕಲು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಿಇಎನ್‌ (ಸೈಬರ್, ಆರ್ಥಿಕ ಹಾಗೂ ಮಾದಕ ವಸ್ತು) ಠಾಣೆ ತೆರೆಯಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಸೋಮವಾರ ನಡೆದ ‘ಪೊಲೀಸ್ ಸಂಸ್ಮರಣ ದಿನಾಚರಣೆ’ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಬೆಂಗಳೂರಿನ ಎಂಟು ವಿಭಾಗಗಳ ಡಿಸಿಪಿ ಅಧೀನದಲ್ಲಿ ಸಿಇಎನ್ ಠಾಣೆ ತೆರೆಯಲು ಈಗಾಗಲೇ ಅನುಮೋದನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಇಂಥ ಠಾಣೆಗಳನ್ನು ತೆರೆಯುವ ಯೋಚನೆ ಇದೆ. ಸೈಬರ್ ಹಾಗೂ ಆರ್ಥಿಕ ವಂಚನೆ, ಮಾದಕ ವಸ್ತು ಸಾಗಣೆ ಹಾಗೂ ಮಾರಾಟ ಪ್ರಕರಣಗಳ ತನಿಖೆಯನ್ನು ಈ ಠಾಣೆಗಳ ಅಧಿಕಾರಿಗಳು ನಡೆಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಅಪರಾಧಗಳನ್ನು ತಡೆಗಟ್ಟಲು ಪೊಲೀಸರು ಪ್ರಾಣವನ್ನೇ ಕೊಟ್ಟಿದ್ದಾರೆ. ಪೊಲೀಸರಿಗೆ ಅವಶ್ಯವಿರುವ ಎಲ್ಲ ಸೌಲಭ್ಯ ನೀಡುವುದು ಸರ್ಕಾರದ ಜವಾಬ್ದಾರಿ. ವಸತಿ ವ್ಯವಸ್ಥೆ ಹಾಗೂ ಮುಂದಿನ ಎರಡು ವರ್ಷದಲ್ಲಿ 16 ಸಾವಿರ ಪೊಲೀಸರ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಯಡಿಯೂರಪ್ಪ ತಿಳಿಸಿದರು.

‘ನಿರ್ಭಯಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ, ಆಧುನಿಕ ಉಪಕರಣ ಹಾಗೂ ಸೌಲಭ್ಯವನ್ನು ಪೊಲೀಸ್ ಇಲಾಖೆಗೆ ಒದಗಿಸಲಾಗುವುದು. ಜೊತೆಗೆ, ಸಮವಸ್ತ್ರ ಹಾಗೂ ಸೌಲಭ್ಯಗಳನ್ನು ಒಳಗೊಂಡ ಕಿಟ್ ಕೂಡಾ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.