ADVERTISEMENT

ಡಿ.ಸಿ ಮಧ್ಯಪ್ರವೇಶದ ಬಳಿಕ ಮುರುಘಾ ಶರಣರ ವಿರುದ್ಧ ಪ್ರಕರಣ ದಾಖಲು

ಕೆ.ನರಸಿಂಹ ಮೂರ್ತಿ
Published 27 ಆಗಸ್ಟ್ 2022, 19:45 IST
Last Updated 27 ಆಗಸ್ಟ್ 2022, 19:45 IST
   

ಮೈಸೂರು: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಮಠದ ಮೂವರು ಹಾಗೂ ಮೈಸೂರಿನ ಇಬ್ಬರ ವಿರುದ್ಧಜಿಲ್ಲಾಧಿಕಾರಿ ಡಾ.ಬಗಾದಿ ಗೌತಂ ಅವರು ಮಧ್ಯಪ್ರವೇಶಿಸಿದನಂತರವೇ ದೂರು ದಾಖಲಾಗಿದೆ!

‘ಸಂತ್ರಸ್ತ ಬಾಲಕಿಯರ ಜೊತೆಗೆ ಸುದೀರ್ಘ ಆಪ್ತಸಮಾಲೋಚನೆ ನಡೆಸಿ, ಹೇಳಿಕೆ ಸತ್ಯಾಂಶವನ್ನು ದೃಢಪಡಿಸಿಕೊಂಡ ಬಳಿಕ, ದೂರು ದಾಖಲಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೂಚನೆ ನೀಡಲಾಯಿತು. ಆದರೆ, ರಕ್ಷಣಾ ಘಟಕದ ಅಧಿಕಾರಿ ದೂರು ದಾಖಲಿಸಲು ಮೊದಲು ಪೊಲೀಸರು ನಿರಾಕರಿಸಿದರು’ ಎಂದು ಮಕ್ಕಳ ಕಲ್ಯಾಣ ಸಮಿತಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಲೈಂಗಿಕ ದೌರ್ಜನ್ಯದ ಘಟನೆಯು ಮೈಸೂರಿನಲ್ಲಿ ನಡೆದಿಲ್ಲ. ಹೀಗಾಗಿ ಇಲ್ಲಿನ ಸಮಿತಿಯ ನೇತೃತ್ವದಲ್ಲಿ ದೂರು ದಾಖಲಿಸಬಹುದೇ ಎಂಬ ಬಗ್ಗೆ ಚರ್ಚೆ ನಡೆಯಿತು. ಎಸಿಪಿ ದರ್ಜೆಯ ಅಧಿಕಾರಿಯೊಬ್ಬರು ಸಮಿತಿಯ ಮುಂದೆ ಬಂದು ಆ ಬಗ್ಗೆ ಗಮನ ಸೆಳೆದರು. ಇಲ್ಲಿ ದೂರು ದಾಖಲಿಸಲು ಒಲವು ತೋರಲಿಲ್ಲ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಮಕ್ಕಳು ಬಂದಿರುವುದರಿಂದ, ಇಲ್ಲಿಯೇ ದೂರು ದಾಖಲಿಸಬೇಕು ಎಂದು ಸಮಿತಿ ಪ್ರತಿಪಾದಿಸಿತು. ಇದನ್ನು ಡಿ.ಸಿ. ಗಮನಕ್ಕೂ ತರಲಾಯಿತು. ಅವರು ಸಮಿತಿಯ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದ ಬಳಿಕವೇ ದೂರು ದಾಖಲಿಸಿದರು’ ಎಂದು ತಿಳಿಸಿವೆ.

‘ಚಿತ್ರದುರ್ಗದಲ್ಲಿ ದೂರು ದಾಖಲಿಸಿದರೆ ನ್ಯಾಯ ದೊರಕುವುದಿಲ್ಲ ಎಂದು, ಮಕ್ಕಳನ್ನು ಇಲ್ಲಿಗೆ ಕರೆತಂದಿದ್ದವರೂ ಪ್ರತಿಪಾದಿಸಿದ್ದರಿಂದ, ಇಲ್ಲಿಯೇ ದೂರು ದಾಖಲಿಸಲು ನಿರ್ಧರಿಸಲಾಯಿತು’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.