ಹುಬ್ಬಳ್ಳಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಮೇಲೆ ಕಾಂಗ್ರೆಸ್ನ ಸಂಸದರು ಸಂಸತ್ತಿನಲ್ಲಿಯೇ ಹಲ್ಲೆಗೆ ಮುಂದಾಗಿದ್ದು, ಕಾಂಗ್ರೆಸ್ನ ಹತಾಶ ಮನೋಭಾವವನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ನಂಬಿಕೆ ಕಳೆದುಕೊಂಡಿದೆ. ಇದು ಕಾಂಗ್ರೆಸ್ನ ದಯನೀಯ ಸ್ಥಿತಿ ತೋರಿಸುತ್ತದೆ. ಆ ಪಕ್ಷಕ್ಕೆ ಮೇಲಿಂದ ಮೇಲೆ ಸೋಲಾಗುತ್ತಿರುವ ಕಾರಣ ಹತಾಶಗೊಂಡಿದೆ’ ಎಂದರು.
‘ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಥರ್ಡ್ ಜೂನಿಯರ್ ಪಾರ್ಟಿ ಆಗಿದೆ. ಜಾರ್ಖಂಡ್ನಲ್ಲಿಯೂ ಜೂನಿಯರ್ ಪಾಟ್ನರ್ ಆಗಿದೆ. ಕಾಂಗ್ರೆಸ್ನ ಸಂಸದರು ಇನ್ನು ಮುಂದಾದರೂ ತಮ್ಮ ವರ್ತನೆ ಸುಧಾರಿಸಿಕೊಳ್ಳಬೇಕು’ ಎಂದು ಹೇಳಿದರು.
ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಿಂದಿನ ಅನೇಕ ಸಮೀಕ್ಷೆಗಳು ನಮ್ಮ ಪಕ್ಷದ ಪರ ಹಾಗೂ ವಿರುದ್ಧ ಬಂದ ನಂತರ ಫಲಿತಾಂಶ ಬೇರೆ ತೆರನಾಗಿದ್ದ ಅನೇಕ ಉದಾಹರಣೆಗಳು ಇವೆ’ ಎಂದರು.
ಉಳಿದವರಿಗೂ ಸಚಿವ ಸ್ಥಾನ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಬೇರೆ, ಬೇರೆ ಪಕ್ಷಗಳಿಂದ ಬಂದವರು ನೆರವಾಗಿದ್ದಾರೆ. ಅವರಿಗೆ ಮೊದಲು ಸಚಿವ ಸ್ಥಾನ ನೀಡಲಾಗಿದೆ. ಉಳಿದವರಿಗೂ ಸೂಕ್ತ ಸಮಯದಲ್ಲಿ ಸಚಿವ ಸ್ಥಾನ ಕೊಡಲಾಗುತ್ತದೆ. ಉಳಿದ ಮೂರೂ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಸರ್ಕಾರ ಗಟ್ಟಿಯಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.