ಬೆಂಗಳೂರು: ನಟ ಪ್ರಕಾಶ್ ರೈ ವಿರುದ್ಧ ಟ್ಟಿಟರ್ನಲ್ಲಿ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿ ಕೋರ್ಟ್ಗೆ ಹಾಜರಾಗಿರುವ ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಅವರನ್ನು ನ್ಯಾಯಾಧೀಶರು ಪೊಲೀಸ್ ವಶಕ್ಕೆ ನೀಡಿದ್ದಾರೆ.
‘ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ’ ಈ ಹಿಂದಿನ ವಿಚಾರಣೆ ವೇಳೆ ಜಾಮೀನು ರಹಿತ ವಾರಂಟ್ ಹೊರಡಿಸಿ ವಿಚಾರಣೆಯನ್ನು ಮುಂದೂಡಿತ್ತು.
ಇದರನ್ವಯ ಪ್ರತಾಪ ಸಿಂಹ ಇಂದು ಕೋರ್ಟ್ಗೆ ಹಾಜರಾಗಿದ್ದರು ಮತ್ತು ವಾರಂಟ್ ಹಿಂಪಡೆಯುವಂತೆ ಅರ್ಜಿ ಸಲ್ಲಿಸಿದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ವಿ.ಪಾಟೀಲ ಅವರು ಪ್ರತಾಪ ಸಿಂಹ ಅವರನ್ನು ಸ್ವಲ್ಪ ಹೊತ್ತು ವಶದಲ್ಲಿ ಇರಿಸಿಕೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸಿದರು.
ಕಳೆದ ಬಾರಿಯ ವಿಚಾರಣೆ ವೇಳೆ ಪ್ರತಾಪ ಸಿಂಹ ವಿಚಾರಣೆಗೆ ಗೈರಾಗಿದ್ದರು. ಅವರನ್ನು ಪ್ರತಿನಿಧಿಸುವ ವಕೀಲರೂ ಕೋರ್ಟ್ನಲ್ಲಿ ಹಾಜರಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್, ಆರೋಪಿಯನ್ನು ಜಾಮೀನು ರಹಿತ ವಾರಂಟ್ ಅಡಿಯಲ್ಲಿ ಕೋರ್ಟ್ಗೆ ಹಾಜರುಪಡಿಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಆದೇಶಿಸಿತ್ತು.
ಪ್ರಕರಣವೇನು?: ‘ಪ್ರತಾಪ ಸಿಂಹ ನನ್ನ ವೈಯಕ್ತಿಕ ಸಂಗತಿ ಪ್ರಸ್ತಾಪಿಸಿ ಅವಹೇಳನಕಾರಿ ಟ್ವೀಟ್ ಮಾಡಿದ್ದಾರೆ’ ಎಂದು ಆರೋಪಿಸಿ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.