ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್–ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುವಂತೆ ವಿನಂತಿಸಿದರು.
ಬಳಿಕ ಮಾತನಾಡಿದ ಪ್ರಜ್ವಲ್, ‘ಸಿದ್ದರಾಮಯ್ಯ ಅವರ ಆಶೀರ್ವಾದ ಪಡೆದಿದ್ದೇನೆ. ನಾವು ಸಿದ್ದರಾಮಯ್ಯ ಅವರನ್ನು ನೋಡಿಕೊಂಡು ಬೆಳೆದವರು. ನಮ್ಮ ಮನೆಯವರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗಿದ್ದೇನೆ’ ಎಂದರು.
‘ಕಡೂರು, ಅರಕಲಗೂಡು, ಅರಸೀಕೆರೆ, ಹಾಸನದಲ್ಲಿ ಪ್ರಚಾರ ನಡೆಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಹಾಸನದ ಕಾಂಗ್ರೆಸ್ ಮುಖಂಡರು ನನಗೆ ಬೆಂಬಲ ನೀಡುತ್ತಿದ್ದಾರೆ’ ಎಂದರು.
‘ಬಿಜೆಪಿ ಅಭ್ಯರ್ಥಿ ಎ. ಮಂಜು ಬಗ್ಗೆ ನನಗಂತೂ ಭಯ ಇಲ್ಲ. ನಾನು ಯಾವತ್ತೂ ಮಂಜು ವಿರುದ್ಧ ಮಾತನಾಡಿಲ್ಲ. ಟೀಕೆ ರಾಜಕಾರಣ ಮಾಡಿಲ್ಲ. ₹400, ₹500 ಕೊಟ್ಟು ಜನರನ್ನು ಸೇರಿಸುವುದು ದೊಡ್ಡದಲ್ಲ. ನಾವು ಹಾಸನ ಜಿಲ್ಲೆ ತುಂಬ ಜನರನ್ನು ಸೇರಿಸುತ್ತೇವೆ’ ಎಂದು ಪ್ರಜ್ವಲ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.