ADVERTISEMENT

ಗರ್ಭಿಣಿ, ಅವಳಿ ಶಿಶು ಸಾವು ಪ್ರಕರಣ: ಬಾಲ ಮಂದಿರದಲ್ಲಿ ತಬ್ಬಲಿ ಬಾಲಕಿಗೆ ಆಶ್ರಯ

ಪ್ರಕ್ರಿಯೆ ಮುಗಿದ ಬಳಿಕ ಸಂಬಂಧಿಗಳ ಸುಪರ್ದಿಗೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 19:36 IST
Last Updated 7 ನವೆಂಬರ್ 2022, 19:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಹೆರಿಗೆ ವೇಳೆ ಸಾವನ್ನಪ್ಪಿದ ತಮಿಳುನಾಡು ಮೂಲದಕಸ್ತೂರಿ ಎಂಬ ಮಹಿಳೆಯ ಆರು ವರ್ಷದ ಅನಾಥ ಹೆಣ್ಣು ಮಗಳಿಗೆ ನಗರದ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ.

ತಮಿಳುನಾಡಿನಿಂದ ಬಂದಿದ್ದ ಮಹಿಳೆಯ ಸಂಬಂಧಿಕರು ನಗರದಲ್ಲೇ ಅಂತ್ಯಕ್ರಿಯೆ ನೆರವೇರಿಸಿ ತೆರಳಿದ್ದಾರೆ. ಅಂತ್ಯಕ್ರಿಯೆ ಸಮಯದಲ್ಲಿ ಬಾಲ ಮಂದಿರದಿಂದ ಬಾಲಕಿಯನ್ನು ಕರೆತರಲಾಗಿತ್ತು. ಬಾಲಕಿ ಜತೆ ಮಾತನಾಡಿದ್ದ ಸಂಬಂಧಿಕರು ತಮ್ಮೊಂದಿಗೆ ಆಕೆಯನ್ನು ಕರೆದುಕೊಂಡು ಹೋಗುವ ಇಚ್ಛೆ ವ್ಯಕ್ತಪಡಿಸಿದ್ದರು.

ಕೆಲವು ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಬಾಲಕಿಯನ್ನು ಕಳುಹಿಸಿ ಕೊಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು.ನಿಯಮದ ಪ್ರಕಾರ ಅನಾಥ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಮುಂದೆ ಮಕ್ಕಳ ರಕ್ಷಣಾಧಿಕಾರಿ ಹಾಜರು ಪಡಿಸುತ್ತಾರೆ. ವಿಚಾರಣೆ ನಂತರ ಸಮಿತಿಯು ಮಗುವಿನ ಪೋಷಣೆಯ ಜವಾಬ್ದಾರಿಯನ್ನು ಬಾಲ ಮಂದಿರಕ್ಕೆ ವಹಿಸುತ್ತದೆ. ಸಂಬಂಧಿಕರು ಮಗುವನ್ನು ಸುಪರ್ದಿಗೆ ಪಡೆಯಲು ಸಮಿತಿಗೆ ಅರ್ಜಿ ಸಲ್ಲಿಸಬೇಕು. ಮಗುವಿನ ಸುರಕ್ಷತೆ ಸಮಿತಿಗೆ ಖಾತರಿಯಾದ ನಂತರವಷ್ಟೇ ಸಂಬಂಧಿಗಳ ಸುಪರ್ದಿಗೆ ಒಪ್ಪಿಸಲಾಗುತ್ತದೆ. ಆ ನಂತರವೂ ಕೆಲ ವರ್ಷ ಸಮಿತಿಯು ಮಗುವಿನ ಸುರಕ್ಷತೆ ನಿಗಾ ವಹಿಸುತ್ತದೆ.

ADVERTISEMENT

ಬಾಲಕಿ ಹೊರ ರಾಜ್ಯವಳಾದ ಕಾರಣ ಅಲ್ಲಿನ ಅಧಿಕಾರಿಗಳಿಗೆ ಸಮಿತಿ ಪತ್ರ ಬರೆದಿದೆ. ಅಧಿಕಾರಿಗಳು ಸಂಬಂಧಿಕರನ್ನು ಪತ್ತೆಮಾಡಿ ಖಚಿತ ಪಡಿಸಿಕೊಳ್ಳುತ್ತಾರೆ. ಮಗುವಿನ ಸುರಕ್ಷಿತೆ ಬಗ್ಗೆ ಮನದಟ್ಟಾದ ನಂತರ ವರದಿ ಕಳುಹಿಸುತ್ತಾರೆ. ವರದಿ ನಂತರ ಮಕ್ಕಳ ಕಲ್ಯಾಣ ಸಮಿತಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.