ADVERTISEMENT

ಹಿಂದೂ ದೇವಾಲಯಗಳ ಮಸೂದೆ ರಾಷ್ಟ್ರಪತಿ ಅಂಕಿತಕ್ಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 22:40 IST
Last Updated 23 ಮೇ 2025, 22:40 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ಬೆಂಗಳೂರು: ಮುಜರಾಯಿ ಇಲಾಖೆಯ ವ್ಯಾಪ್ತಿಯ ಶ್ರೀಮಂತ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಆದಾಯದಲ್ಲಿ ಒಂದು ಪಾಲನ್ನು ‘ಸಾಮಾನ್ಯ ಸಂಗ್ರಹಣಾ ನಿಧಿ’ಗೆ ವರ್ಗಾಯಿಸಲು ಅವಕಾಶ ಮಾಡಿಕೊಡುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ’ಯನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಾಯ್ದಿರಿಸಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ವಾಪಸ್‌ ಕಳುಹಿಸಿದ್ದಾರೆ.

‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ– 1997’ರ ತಿದ್ದುಪಡಿಗಾಗಿ ‌ಉಭಯ ಸದನಗಳ ಅನುಮೋದನೆ ಪಡೆಯಲಾಗಿತ್ತು. ಆದರೆ, ಕೆಲವು ಸ್ಪಷ್ಟೀಕರಣ ಕೇಳಿ ರಾಜ್ಯಪಾಲರು ವಾಪಸ್‌ ಕಳುಹಿಸಿದ್ದರು. ಮುಜರಾಯಿ ಇಲಾಖೆಯು ಸ್ಪಷ್ಟನೆಯೊಂದಿಗೆ ಮತ್ತೆ ರಾಜ್ಯಪಾಲರ ಅಂಕಿತಕ್ಕೆ ಮಸೂದೆಯನ್ನು ಕಳುಹಿಸಿತ್ತು.

ಈಗ ರಾಜ್ಯಪಾಲರು, ‘ಈ ಮಸೂದೆಯ ಅಂಶಗಳಿಗೆ ಹೈಕೋರ್ಟ್‌ ತಡೆ ನೀಡಿದೆ. ಜತೆಗೆ ಸಂವಿಧಾನದಲ್ಲೂ ನಿರ್ಬಂಧಗಳಿವೆ. ಹೀಗಾಗಿ ಇದನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಾಯ್ದಿರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಆದಾಯ ಸಂಗ್ರಹವಾಗುವ ದೇವಾಲಯಗಳ ಆದಾಯದಲ್ಲಿ ಶೇ 10ರಷ್ಟು, ₹10 ಲಕ್ಷಕ್ಕಿಂತ ಹೆಚ್ಚು ಮತ್ತು ₹ 1 ಕೋಟಿಗಿಂತ ಕಡಿಮೆ ಸಂಗ್ರಹವಾಗುವ ದೇವಾಲಯಗಳ ಆದಾಯದ ಶೇ 5ರಷ್ಟನ್ನು ‘ಸಾಮಾನ್ಯ ಸಂಗ್ರಹಣಾ ನಿಧಿ’ ವರ್ಗಾಯಿಸಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.