ADVERTISEMENT

ಅದ್ದೂರಿ ಸ್ವಾಗತ ಕೋರಿದ ಮಂಡ್ಯದ ಜನತೆಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮಾರ್ಚ್ 2023, 10:31 IST
Last Updated 12 ಮಾರ್ಚ್ 2023, 10:31 IST
   

ಬೆಂಗಳೂರು: ಇಂದು ನಡೆದ ರೋಡ್‌ ಶೋ ವೇಳೆ ತಮಗೆ ಅದ್ದೂರಿ ಸ್ವಾಗತ ಕೋರಿದ ಮಂಡ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ.


ಮಂಡ್ಯದ ರೋಡ್‌ ಶೋ ವಿಡಿಯೊ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಪುಷ್ಪವೃಷ್ಟಿಯೊಂದಿಗೆ ಅಪಾರ ಪ್ರೀತಿ ತೋರಿದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ರೋಡ್‌ ಶೋ ವೇಳೆ ಜನ ತಮ್ಮ ಕಾರಿನತ್ತ ಹೂ ಮಳೆಗೈಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಸಾವಿರಾರು ಜನರ ಜಯಘೋಷಗಳ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ನಗರದ ಪ್ರವಾಸಿ ಮಂದಿರದಿಂದ ನಂದ ಟಾಕೀಸ್‌ವರೆಗೆ 1.8 ಕಿ.ಮೀ ರೋಡ್‌ ಶೋ ನಡೆಸಿದರು.


ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜನರು ಸಾಲುಗಟ್ಟಿ ನಿಂತಿದ್ದರು. ‘ಮೋದಿ ಮೋದಿ’ ಜಯಘೋಷ ಮೊಳಗಿಸಿದ ಜನ ಪ್ರಧಾನಿ ಮೇಲೆ ಹೂವಿನ ಮಳೆಗರೆದರು. ಶ್ವೇತವರ್ಣದ ಜುಬ್ಬಾ ಧರಿಸಿದ್ದ ನರೇಂದ್ರ ಮೋದಿ ಅವರು ಜನರತ್ತ ಕೈಬೀಸುತ್ತಾ ಮುಂದೆ ಸಾಗಿದರು, ತಮ್ಮ ಕಾರಿನ ಮೇಲೆ ಬಿದ್ದಿದ್ದ ಹೂವು ತೆಗೆದು ಜನರ ಮೇಲೆ ಎರಚಿ ಸಂಭ್ರಮಪಟ್ಟರು.

ADVERTISEMENT


ಪ್ರಧಾನಿ ಟ್ವೀಟ್‌ ಮಾಡಿರುವ ಈ ವಿಡಿಯೊಕ್ಕೆ ಸಾಕಷ್ಟು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ನೀವು ನಮ್ಮ ಹೆಮ್ಮೆಯ ಪ್ರಧಾನಿ ಎಂದಿರುವ ಹಲವಾರು ಅಭಿಮಾನಿಗಳು ಮಂಡ್ಯದ ರೋಡ್‌ ಶೋದ ಅನೇಕ ಚಿತ್ರಗಳನ್ನು ಮೋದಿ ಟ್ವೀಟ್‌ನ ಪ್ರತಿಕ್ರಿಯೆ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.