ವಿಜಯಪುರ: ಖಾಸಗಿ ಆಸ್ಪತ್ರೆಗಳ ನರ್ಸ್, ಲ್ಯಾಬ್ ಟೆಕ್ನಿಷಿಯನ್ಸ್ ಸೇರಿದಂತೆ ಅರೆ ವೈದ್ಯಕೀಯ ಸಿಬ್ಬಂದಿ ತಕ್ಷಣಕ್ಕೆ ಕೆಲಸಕ್ಕೆ ಹಾಜರಾಗದಿದ್ದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಸಕ್ಕೆ ಹಾಜರಾಗುವಂತೆ ಈಗಾಗಲೇ ಹಲವು ಬಾರಿ ಜಿಲ್ಲಾಡಳಿತದಿಂದ ಮನವಿ ಮಾಡಲಾಗಿದೆ. ಕೊನೆಯದಾಗಿ ಮತ್ತೊಮ್ಮೆ ಮನವಿ ಮಾಡುತ್ತೇವೆ. ಇದಕ್ಕೆ ಬಗ್ಗದವರ ನೋಂದಣಿ ಸರ್ಟಿಫಿಕೆಟ್ ರದ್ದುಗೊಳಿಸಲಾಗುವುದು ಎಂದರು.
ಖಾಸಗಿ ಆಸ್ಪತ್ರೆಗಳು ಬಾಗಿಲು ಬಂದ್ ಆಗಿರುವುದರಿಂದ ಇತರೆ ರೋಗಗಳಿಂದ ಬಳಲುತ್ತಿರುವವರಿಗೆ ಸಮಸ್ಯೆಯಾಗುತ್ತಿದೆ. ಸದ್ಯ ಎದುರಾಗಿರುವ ಆಪತ್ಕಾಲದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಮಾನವೀಯ ದೃಷ್ಟಿಯಿಂದಲಾದರೂ ರೋಗಿಗಳ ಸೇವೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಐಎಂಎ ಮನವಿ: ಕೊರೊನಾ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಅರೆವೈದ್ಯಕೀಯ ಸಿಬ್ಬಂದಿ ಮನೆಯಲ್ಲಿ ಕೂರುವುದು ತರವಲ್ಲ, ಆಸ್ಪತ್ರೆಯಲ್ಲೆ ವಸತಿ, ಊಟ ಕಲ್ಪಿಸಲಾಗುವುದು. ಕಾರಣ ಎಲ್ಲ ಅರೆವೈದ್ಯಕೀಯ ಸಿಬ್ಬಂದಿ ಕರ್ತವ್ಯಕ್ಕೆ ಮತ್ತೆ ಹಾಜರಾಗಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಮನವಿ ಮಾಡಿದೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುವವರನ್ನು ಸಾರ್ವಜನಿಕರು ಗೌರವದಿಂದ ಕಾಣಬೇಕು. ಅಲ್ಲದೇ, ಜಿಲ್ಲಾಡಳಿತ ಕೂಡ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಂಘ ಮನವಿ ಮಾಡಿದೆ.
ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಜಿಲ್ಲಾಡಳಿತ ಮಾರ್ಪಾಡು ಮಾಡಿ ಎಲ್ಲ ಖಾಸಗಿ ಆಸ್ಪತ್ರೆಗಳು ಇನ್ನುಳಿದ ಕಾಯಿಲೆಗಳ ಚಿಕಿತ್ಸೆಗಾಗಿ ತೆರೆದಿಟ್ಟಿರಬೇಕೆಂದು ಆದೇಶ ಮಾಡಿರುವುದರಿಂದ ಎಲ್ಲ ಖಾಸಗಿ ವೈದ್ಯರು ರೋಗಿಗಳ ಸೇವೆಗಾಗಿ ಸದಾ ಟೊಂಕ ಕಟ್ಟಿ ನಿಂತಿದ್ದಾರೆ ಎಂದು ಸಂಘ ತಿಳಿಸಿದೆ.
ಹಲವು ದಿನಗಳಿಂದ ರಜೆ ಮೇಲೆ ಹೋಗಿರುವ ಖಾಸಗಿ ಆಸ್ಪತ್ರೆಯ ಶೇ 70 ರಿಂದ ಶೇ 80 ಸ್ಟಾಫ್ ನರ್ಸ್, ಅರೆವೈದ್ಯಕೀಯ ಸಿಬ್ಬಂದಿ ತಕ್ಷಣ ಕೆಲಸಕ್ಕೆ ಹಾಜರಾಗಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ ಎಸ್.ಎಸ್.ನಂದಿ, ಕಾರ್ಯದರ್ಶಿ ಡಾ. ಗಿರೀಶ ಕುಲ್ಲೊಳ್ಳಿ ಐಎಂಎ ಕೇಂದ್ರ ಕೌನ್ಸಿಲ್ ಸದಸ್ಯ ಡಾ ರವಿಕುಮಾರ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.