ADVERTISEMENT

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ: ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಪತಿ ಸೆರೆ

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ: ಜ್ಞಾನಜ್ಯೋತಿ ಶಾಲೆಗೆ ಬಂಧಿತರ ಕರೆತಂದು ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 21:06 IST
Last Updated 18 ಏಪ್ರಿಲ್ 2022, 21:06 IST
ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರಾದ ಅಭ್ಯರ್ಥಿಗಳನ್ನು ಮತ್ತು ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿಯರನ್ನು ಸೋಮವಾರ ಸಿಐಡಿ ಪೊಲೀಸರು ಕಲಬುರಗಿಯ ಜ್ಞಾನಜ್ಯೋತಿ ಶಾಲೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದರು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರಾದ ಅಭ್ಯರ್ಥಿಗಳನ್ನು ಮತ್ತು ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿಯರನ್ನು ಸೋಮವಾರ ಸಿಐಡಿ ಪೊಲೀಸರು ಕಲಬುರಗಿಯ ಜ್ಞಾನಜ್ಯೋತಿ ಶಾಲೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದರು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌   

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕುರಿತಂತೆ ಇಲ್ಲಿನ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮೇಲೆ ಸೋಮವಾರ ಮತ್ತೆ ದಾಳಿ ಮಾಡಿದ ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಶಾಲೆಯ ಮುಖ್ಯಸ್ಥೆ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಅವರ ಪತಿ ರಾಜೇಶ ಅವರನ್ನು ಅಧಿಕಾರಿಗಳು ಭಾನುವಾರ ತಡರಾತ್ರಿ ಬಂಧಿಸಿದ್ದು, ಅವರ ವಾಹನ ವಶಪಡಿಸಿಕೊಂಡಿದ್ದಾರೆ.

ಇವರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿದೆ.

ಈಗಾಗಲೇ ಬಂಧಿತರಾಗಿರುವ ಮೂವರು ಅಭ್ಯರ್ಥಿಗಳು ಹಾಗೂ ಪರೀಕ್ಷೆ ಮೇಲ್ವಿಚಾರಕಿಯರಾಗಿ ಕಾರ್ಯನಿರ್ವಹಿಸಿದ್ದ ಮೂವರು ಶಿಕ್ಷಕಿಯರನ್ನುಸ್ಥಳಕ್ಕೆ ಕರೆತಂದು, ವಿಚಾರಣೆ ನಡೆಸಿದರು. ದಿವ್ಯಾ ಅವರ ಮನೆ ಮೇಲೆ ಭಾನುವಾರ ದಾಳಿ ನಡೆದಿತ್ತು.

ADVERTISEMENT

‘ರಾಜೇಶ ಅವರು ತನಿಖೆ ವೇಳೆ ಸರಿಯಾಗಿ ಉತ್ತರ ನೀಡಲಿಲ್ಲ. ಆರೋಪಿಯನ್ನು ತಮ್ಮ ಕಾರಿನಲ್ಲಿ ಬೇರೆ ಸ್ಥಳಕ್ಕೆ ಕಳುಹಿಸಿ ತಲೆಮರೆಸಿಕೊಳ್ಳಲು ನೆರವಾಗಿದ್ದಾರೆ. ಈ ಆರೋಪದಡಿ ಬಂಧಿಸಲಾಗಿದೆ. ಈಗ ಅವರಿಂದ ಮತ್ತಷ್ಟು ಉಪಯುಕ್ತ ಮಾಹಿತಿ ಸಿಕ್ಕಿವೆ. ಇದರಲ್ಲಿ ಶಾಮೀಲಾಗಿರುವವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಅಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನಾಪತ್ತೆ:ಬಂಧಿತ ಮೂವರು ಅಭ್ಯರ್ಥಿಗಳಲ್ಲಿ ಒಬ್ಬರು ಈ ಶಾಲೆಯ ಕೆಳಮಹಡಿ,ಇಬ್ಬರು ಎರಡನೇ ಮಹಡಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಈ ಮೂರೂ ಕೋಣೆಗಳು, ದಿವ್ಯಾ ಹಾಗರಗಿ ಅವರ ಕಚೇರಿ, ಮುಖ್ಯಶಿಕ್ಷಕರ ಕೋಣೆಯನ್ನು ಪರಿಶೀಲಿಸಿದರು. ಸಿಸಿಟಿವಿ ಕ್ಯಾಮೆರಾಗಳು ಸರಿಯಾದ ಡೈರೆಕ್ಷನ್‌ನಲ್ಲಿ ಇವೆಯೇ ಎಂದು ಪರಿಶೀಲಿಸಿ ಫೋಟೊ ಸಮೇತ ದಾಖಲಿಸಿಕೊಂಡರು.

ದಿವ್ಯಾ ಹಾಗರಗಿ, ಮುಖ್ಯ ಶಿಕ್ಷಕ ಹಾಗೂ ಇನ್ನಿಬ್ಬರು ಮೇಲ್ವಿಚಾರ ಕರುಪ್ರಕರಣ ಬಯಲಿಗೆ ಬಂದಾಗಿ ನಿಂದಲೂ ತಲೆಮರೆಸಿಕೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾದ ದಾಖಲೆಗಳನ್ನು ಅಳಿಸಲಾಗಿದೆ. ಹೀಗಾಗಿ, ಕೆಲ ಉಪಕರಣಗಳನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ.

ಅಭ್ಯರ್ಥಿಗಳಾದ ಕಲಬುರಗಿಯ ವೀರೇಶ ನಿಡಗುಂದ, ಅರುಣ ಪಾಟೀಲ, ರಾಯಚೂರಿನ ಕೆ.ಪ್ರವೀಣಕುಮಾರ, ಚೇತನ ನಂದಗಾಂವ, ಪರೀಕ್ಷಾ ಮೇಲ್ವಿಚಾರಣೆಗೆ ನಿಯೋಜನೆಗೊಂಡಿದ್ದ ಶಿಕ್ಷಕಿಯರಾದ ಸುಮಾ, ಸಿದ್ದಮ್ಮ ಹಾಗೂ ಸಾವಿತ್ರಿ ಅವರನ್ನು ಇದೇ 20ರ ವರೆಗೆ ಸಿಐಡಿ ಪೊಲೀಸರ ವಶಕ್ಕೆ ನೀಡಲಾಗಿದೆ.

ಸಿಐಡಿ ಹೆಚ್ಚುವರಿ ಎಸ್‌ಪಿ ರಾಘವೇಂದ್ರ ಹೆಗಡೆ, ಡಿವೈಎಸ್‌ಪಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ರಾಠೋಡ ನೇತೃತ್ವದ ತಂಡ ತನಿಖೆಯನ್ನು ಚುರುಕುಗೊಳಿಸಿದೆ.

ನ್ಯಾಯಾಂಗ ಬಂಧನಕ್ಕೆ: ಬಂಧಿತ ರಾಜೇಶ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.

ಸಿಐಡಿಗೆ ಮುಕ್ತ ಅವಕಾಶ: ಸಿ.ಎಂ

ಬೆಂಗಳೂರು: ‘ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಗೃಹ ಸಚಿವರ ಗಮನಕ್ಕೆ ಬಂದ ತಕ್ಷಣ ನಿಷ್ಪಕ್ಷಪಾತ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ. ತನಿಖೆಗೆ ನಾವು ಮುಕ್ತ ಅವಕಾಶ ನೀಡಿದ್ದೇವೆ ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.