ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯ ಹಲವು ವಿಷಯಗಳ ಉಪನ್ಯಾಸಕರ ನೇಮಕಾತಿ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, 2–3 ದಿನಗಳಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
‘ಪ್ರಜಾವಾಣಿ’ಯಲ್ಲಿ ಇದೇ 19ರಂದು ಪ್ರಕಟವಾದ ‘ಕೀ ಉತ್ತರದಲ್ಲೇ ತಪ್ಪು, ಉಳಿದ ಬಿಕ್ಕಟ್ಟು’ ಸುದ್ದಿಯ ಹಿನ್ನೆಲೆಯಲ್ಲಿ ಸಚಿವರು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಿಂದ ಮಾಹಿತಿ ಕೇಳಿದ್ದರು.
ಅವರು ನೀಡಿದ ಉತ್ತರದಿಂದ ಸಮಾಧಾನಗೊಂಡಿರುವ ಸಚಿ ವರು,ಯಾವುದೇ ತಡೆಯಾಜ್ಞೆಯಾಗಲೀ, ನ್ಯಾಯಾಲಯದ ಆದೇಶವಾಗಲೀ ವಿಚಾರಣೆ ಬಾಕಿಯಿಲ್ಲದ ಕಾರಣ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
‘ಕೆಲವು ಅಭ್ಯರ್ಥಿಗಳು ಇತಿಹಾಸ, ಕನ್ನಡ ಹಾಗೂ ಸಮಾಜಶಾಸ್ತ್ರ ವಿಷಯಗಳಲ್ಲಿ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿ ಕೀ ಉತ್ತರಗಳು ಸರಿಯಲ್ಲ ವೆಂದು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದಾವೆ ಹೂಡಿದ್ದು, ನ್ಯಾಯಾಲಯವು ವಿಚಾರಣೆ ನಡೆಸಿ ಯಾವುದೇ ನಿರ್ದೇಶನವಾಗಲಿ, ತಡೆಯಾಜ್ಞೆಯಾಗಲೀ ನೀಡದೇ ಪ್ರಕರಣ ಮುಕ್ತಾಯಗೊಳಿಸಿದೆ. ಹೀಗಾಗಿ 1:2 ಅನುಪಾತದಲ್ಲಿ 2,320 ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯನ್ನು ಜುಲೈ2019ರಲ್ಲಿ ನಿರ್ವಹಿಸಲಾಗಿದೆ. 2019ರ ಆಗಸ್ಟ್ 26ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.ತಾತ್ಕಾಲಿಕ ಆಯ್ಕೆ ಪಟ್ಟಿಗೆ ಪೂರಕವಾಗಿ ಸ್ವೀಕರಿಸಲಾಗಿರುವ 91 ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ನಿಯಮಾನುಸಾರವೇ ಎಲ್ಲ ಕ್ರಮಗಳನ್ನು ನಿರ್ವಹಿಸಲಾಗಿರುತ್ತದೆ’ ಎಂದು ಕೆಇಎ ನೀಡಿದ ಉತ್ತರವನ್ನು ಉಲ್ಲೇಖಿಸಿ ಸಚಿವ ಸುರೇಶ್ಕುಮಾರ್ ಅವರು ಈ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.