ADVERTISEMENT

ಪಲ್ಸ್ ಪೋಲಿಯೊ: ಸಿಎಂ ಬೊಮ್ಮಾಯಿ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 7:14 IST
Last Updated 27 ಫೆಬ್ರುವರಿ 2022, 7:14 IST
ಗೃಹ ಕಚೇರಿ ಕೃಷ್ಣಾದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ.
ಗೃಹ ಕಚೇರಿ ಕೃಷ್ಣಾದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ.   

ಬೆಂಗಳೂರು: ರಾಷ್ಟ್ರೀಯ ಲಸಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂಕೇತಿಕವಾಗಿ ಭಾನುವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ‘ಲಸಿಕಾ ಕಾರ್ಯಕ್ರಮ ಬಹಳ ಮುಖ್ಯ. ಸುಮಾರು 25 ವರ್ಷಗಳ ಹಿಂದೆ ನಾವೆಲ್ಲರೂ ಪೋಲಿಯೋದ ದುಷ್ಪರಿಣಾಮವನ್ನು ಕಣ್ಣಾರೆ ಕಂಡಿದ್ದೇವೆ. ಅಂಗವಿಕಲತೆ ಮುಖ್ಯ ಕಾರಣ ಆಗ ಪೋಲಿಯೋ ಆಗಿತ್ತು. ದೊಡ್ಡ ಪ್ರಮಾಣದ ಜೀವ ಹಾನಿಯೂ ಆಗಿತ್ತು’ ಎಂದು ನೆನಪಿಸಿದರು.

‘ಲಸಿಕಾ ಅಭಿಯಾನವನ್ನು ಅನುಷ್ಠಾನಗೊಳಿಸುವ ವಿಷಯದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ. ಇದಕ್ಕೆ ಜನ ಸ್ಪಂದನೆಯೂ ಉತ್ತಮವಾಗಿದೆ’ ಎಂದರು.

ADVERTISEMENT

‘ದೇಶವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಿದರೂ ಲಸಿಕಾ ಅಭಿಯಾನ ಮುಂದುವರಿಸುವ ಅಗತ್ಯ ಇದೆ’ ಎಂದ ಮುಖ್ಯಮಂತ್ರಿ, ‘ರೋಗಗಳ ನಿವಾರಣೆಯಲ್ಲಿ ಪ್ರಧಾನಿಯವರ ವೈಜ್ಞಾನಿಕ ಚಿಂತೆನೆಯೂ ಇದೆ. ಸ್ವಚ್ಛತೆಯಿಂದ ಹಲವು ರೋಗಳನ್ನು ದೂರ ಇಡಬಹುದು ಎಂಬ ಕಾರಣಕ್ಕೆ ಅವರು ಅದಕ್ಕೆ ಪ್ರಾಮುಖ್ಯತೆ ನೀಡಿ ಸ್ವಚ್ಛ ಅಭಿಯಾನವನ್ನೇ ಕೈಗೊಂಡಿದ್ದರು’ ಎಂದರು.

‘ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್‌ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಆ ಯಶಸ್ಸು ಕೂಡಾ ಪ್ರಧಾನಿಗೆ ಸಲ್ಲುತ್ತದೆ‘ ಎಂದರು

ಕೆಳದಿ ಚೆನ್ನಮ್ಮನ ಪುಣ್ಯತಿಥಿ: ‘ಮುಂದಿನ ವರ್ಷ ಕೆಳದಿಯಲ್ಲಿ ಕೆಳದಿ ರಾಣಿ ಚೆನ್ನಮ್ಮನ ಪುಣ್ಯತಿಥಿಯನ್ನು ದೊಡ್ಡ ಪ್ರಮಾಣದಲ್ಲಿ ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

‘ಅಲ್ಲದೆ, ಕೆಳದಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸಮಗ್ರ ಅಭಿವೃದ್ಧಿ ಮಾಡಲು ಕೂಡಾ ಸರ್ಕಾರ ತೀರ್ಮಾನಿಸಿದೆ. ಪಠ್ಯ ಪುಸ್ತಕದಲ್ಲೂ ಕೆಳದಿ ಚೆನ್ನಮ್ಮ ಕುರಿತ ವಿಷಯಗಳನ್ನು ಅಳವಡಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದರು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಶ್ವಾಸ ಗುರು ವಚನಾನಂದ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.