ಬೆಂಗಳೂರು: ಮುಂಗಾರು ಪೂರ್ವ ಮಳೆ ಅಲ್ಲಲ್ಲಿ ಸುರಿಯುತ್ತಿದ್ದು, ಮಂಗಳವಾರ ಸಂಜೆ ಸಿಡಿಲು ಬಡಿದು ಕಡೂರು ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಸಿಡಿಲಿಗೆ ರೈತ ರೇವಣ್ಣ (48) ಎಂಬುವವರು ಮೃತಪಟ್ಟಿದ್ದಾರೆ. ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರದಲ್ಲಿ 80 ಕುರಿಗಳು, ಹಿರೇಮನ್ನಾಪುರ ಹಾಗೂ ವಕ್ಕಂದುರ್ಗ ಗ್ರಾಮಗಳಲ್ಲಿ ತಲಾ ಎರಡು ಎತ್ತು ಹಾಗೂ ಹಸುಗಳು ಸಿಡಿಲಿಗೆ ಬಲಿಯಾಗಿವೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ ಬುಧವಾರ ಸಂಜೆ ಭಾರಿ ಪ್ರಮಾಣದಲ್ಲಿ ಬಿರುಗಾಳಿ ಹಾಗೂ ತುಂತುರು ಮಳೆ ಬಿದ್ದಿದೆ.
ಯಾದಗಿರಿ ಜಿಲ್ಲೆಯ ವಡಗೇರಾ, ಸುರಪುರ ಮತ್ತು ಕೆಂಭಾವಿಯಲ್ಲಿ ಬುಧವಾರ ಮಳೆಯಾಯಿತು. ನಗರದಲ್ಲಿ ಸಂಜೆ ನಾಲ್ಕು ಗಂಟೆಯ ನಂತರ ಗುಡುಗು ಸಹಿತ ತುಂತುರು ಮಳೆ ಆರಂಭಗೊಂಡಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಜೋರಾಗಿ ಮಳೆಯಾಯಿತು. ಭಾರಿ ಬಿರುಗಾಳಿಯಿಂದ ಮರಗಳು ಧರೆಗೆ ಉರುಳಿದ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಹುಬ್ಬಳ್ಳಿ ನಗರ, ಹೊಸಪೇಟೆ, ಉತ್ತರ ಕನ್ನಡದ ಬನವಾಸಿಯಲ್ಲಿ ಸಾಯಂಕಾಲ ಗುಡುಗು, ಸಿಡಿಲಿ
ನೊಂದಿಗೆ ಆಲಿಕಲ್ಲಿನ ಮಳೆಯಾಗಿದೆ.
ಬಿರುಸಿನ ಗಾಳಿ, ಗುಡುಗಿನ ಆರ್ಭಟದೊಂದಿಗೆ ಅರ್ಧಗಂಟೆಗೂ ಹೆಚ್ಚು ಹೊತ್ತು ಹುಬ್ಬಳ್ಳಿಯಲ್ಲಿ ಆಲಿಕಲ್ಲು ಮಳೆ ಸುರಿಯಿತು. ಹೊಸಪೇಟೆ ತಾಲ್ಲೂಕಿನಗೊಲ್ಲರಹಳ್ಳಿಯಲ್ಲಿ ಬಿರುಸಿನ ಮಳೆಯಾಯಿತು. ಜಿ.ನಾಗಲಾಪುರ, ಗರಗದಲ್ಲೂ ಕೆಲ ನಿಮಿಷ ಮಳೆಯಾಗಿದೆ. ಆಲಿಕಲ್ಲು ಬೀಳುತ್ತಿದ್ದಂತೆ ಜನ ಕಟ್ಟಡ, ಮಳಿಗೆಗಳ ಆಶ್ರಯ ಪಡೆದರು. ಚಿಣ್ಣರು ಆಲಿಕಲ್ಲು ಮಳೆ ನೋಡಿ ಸಂಭ್ರಮಿಸಿದರು.
ಗದಗ ಹಾಗೂ ಹಾವೇರಿಯಲ್ಲಿ ಸಾಮಾನ್ಯ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.