ಬೆಂಗಳೂರು: ಸೋಮವಾರ ರಾಜ್ಯದ ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಮೈಸೂರು ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಚಿಕ್ಕಮಗಳೂರು ನಗರದಲ್ಲಿ ಸೋಮವಾರ ಗುಡುಗು ಸಹಿತ ಮಳೆಯಾಯಿತು. ತಾಲ್ಲೂಕಿನ ಕೈಮರ, ವಸ್ತಾರೆ, ಅತ್ತಿಗುಂಡಿ, ಆಲ್ದೂರು ಭಾಗದಲ್ಲಿಯೂ ಮಳೆಯಾಗಿದೆ. ಕಾಫಿ ನಾಡಿನಲ್ಲಿ ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ, ಪುನರಾಂಭಗೊಂಡಿದೆ. ರೈತರಲ್ಲಿ ಹರ್ಷ ಮೂಡಿಸಿದೆ.
ಮೈಸೂರಿನಲ್ಲಿ ಗಾಳಿ, ಗುಡುಗು–ಸಿಡಿಲು ಸಹಿತ ಅಬ್ಬರದ ಮಳೆಯಾಗಿದ್ದು, ಪಿರಿಯಾಪಟ್ಟಣ ಹಾಗೂ ಹನ
ಗೋಡಿನಲ್ಲಿ ಉತ್ತಮ ಮಳೆಯಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ಹಾಗೂ ಶ್ರೀರಂಗಪಟ್ಟಣದಲ್ಲಿ ಹಾಗೂ ಹಾಸನ ಜಿಲ್ಲೆಯ ಎಚ್. ಭೈರಾಪುರದಲ್ಲಿ ಸಿಡಿಲು ಬಡಿದು ಎಮ್ಮೆ ಮೃತಪಟ್ಟಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸದುರ್ಗ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಸೋಮವಾರ ಸಂಜೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು.
ತಗ್ಗು ಪ್ರದೇಶದ ಜಮೀನು, ಬ್ಯಾರೇಜ್, ಚೆಕ್ ಡ್ಯಾಂಗೆ ನೀರು ಹರಿದು ಬಂದಿದೆ. ಮಳೆ ಇಲ್ಲದೇ ಬಾಡುವ ಸ್ಥಿತಿಯಲ್ಲಿದ್ದ ಎಳ್ಳು, ಹೆಸರು ಬೆಳೆಗೆ ಸಹಕಾರಿಯಾಗಿದೆ ಎನ್ನಲಾಗಿದೆ.
ಕೆಲವೆಡೆ ಬಿರುಗಾಳಿಗೆ ತೆಂಗು, ಅಡಿಕೆ ಸೇರಿ ಇನ್ನಿತರ ಮರಗಳು ಧರೆಗುರುಳಿವೆ. ಬಾಗೂರು, ಪಾಳೆದಹಳ್ಳಿ, ಶ್ರೀರಂಗಪುರ ಗ್ರಾಮಗಳಲ್ಲಿ ಹದವಾದ ಮಳೆಯಾಗಿದೆ. ನಾಯಕನಹಟ್ಟಿ ಹೋಬಳಿ ರೇಖಲೆಗೆರೆ ಗ್ರಾಮದಲ್ಲಿ ಮೂರು ಕಡೆ ಚಾವಣಿಗಳು ಹಾರಿಹೋಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.