ಬೆಂಗಳೂರು: ‘ಮುಂಗಾರು ಮಾರುತಗಳ ನಿರ್ಗಮನ ಹಾಗೂ ಹಿಂಗಾರು ಮಾರುತಗಳ ಪ್ರವೇಶದ ನಡುವಿನ ಹವಾಮಾನ ವೈಪರೀತ್ಯ ಹಾಗೂಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಎರಡು ವಾರಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯಿತು’ ಎಂದುಕೃಷಿ ಹವಾಮಾನ ತಜ್ಞ ಎಂ.ಬಿ.ರಾಜೇಗೌಡ ತಿಳಿಸಿದರು.
‘ಹವಾಮಾನದ ಈ ವೈಪರೀತ್ಯಗಳಿಂದ ಪ್ರಸ್ತುತಮೋಡಗಳ ಸಾಂದ್ರತೆ ಹೆಚ್ಚಿದೆ ಹಾಗೂ ಯಾವುದೇ ದಿಕ್ಕಿಗೆ ಚಲಿಸಲು ವಾತಾವರಣದ ಒತ್ತಡ ಅವಕಾಶ ಕೊಡದ ಕಾರಣ ಮಳೆ ಹೆಚ್ಚು ಸುರಿಯುತ್ತಿದೆ’ ಎಂದರು.
‘ರಾಜ್ಯದಲ್ಲಿ ಮುಂಗಾರು ಜೂನ್ ಮೊದಲ ವಾರದಲ್ಲಿ ಪ್ರಾರಂಭಗೊಂಡು ಅಕ್ಟೋಬರ್ ಮೂರನೇ ವಾರದವರೆಗೆ ಇರುವುದು ವಾಡಿಕೆ. ನಂತರ ಮುಂಗಾರು ಮಳೆಯ ಹಿಂತೆಗೆಯುವಿಕೆಯು, ರಾಜ್ಯದ ಈಶಾನ್ಯ ಜಿಲ್ಲೆಗಳ ಮೂಲಕ ಹಾಯ್ದು ಪಶ್ಚಿಮ ಕರಾವಳಿ ಮಾರ್ಗವಾಗಿ ಅರಬ್ಬಿ ಸಮುದ್ರಕ್ಕೆ ತಲುಪುತ್ತದೆ’ ಎಂದು ವಿವರಿಸಿದರು.
‘ಈ ವೇಳೆವಾತಾವರಣದ ತೇವಾಂಶವನ್ನು ಜೊತೆಯಲ್ಲಿ ತರುತ್ತದೆ. ಮೋಡಗಳ ಸಾಂದ್ರತೆ ಹೆಚ್ಚಾದಾಗ ಮೋಡಗಳ ಸಿಡಿಲಿಕೆ (ಮೇಘ ಸ್ಪೋಟ) ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತದೆ.ರಾಜ್ಯದಲ್ಲಿ ಈ ಎರಡೂ ಪರಿಸ್ಥಿತಿಗಳು ಏಕ ಕಾಲದಲ್ಲಿ ಸಂಭವಿಸಿದ್ದರಿಂದ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗುತ್ತಿದ್ದು, ತಿಂಗಳಾಂತ್ಯಕ್ಕೆ ಇದು ಕೊನೆಗೊಳ್ಳಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.