ADVERTISEMENT

ರಾಜಾಸೀಟ್‌ ಬಳಿ ಮರಕ್ಕೆ ಕೊಡಲಿ ಪೆಟ್ಟು 

ಗ್ರೀನ್‌ ಸಿಟಿ ಫೋರಂ ಸದಸ್ಯರ ಪ್ರತಿಭಟನೆ, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 17:30 IST
Last Updated 5 ಜೂನ್ 2019, 17:30 IST
ಮರ ಕಡಿದು ಹಾಕಿರುವ ಕ್ರಮ ಖಂಡಿಸಿ, ಮಡಿಕೇರಿಯ ರಾಜಾಸೀಟ್‌ ಎದುರು ಬುಧವಾರ ಪ್ರತಿಭಟನೆ ನಡೆಸಿದ ಗ್ರೀನ್‌ ಸಿಟಿ ಫೋರಂ ಸದಸ್ಯರು
ಮರ ಕಡಿದು ಹಾಕಿರುವ ಕ್ರಮ ಖಂಡಿಸಿ, ಮಡಿಕೇರಿಯ ರಾಜಾಸೀಟ್‌ ಎದುರು ಬುಧವಾರ ಪ್ರತಿಭಟನೆ ನಡೆಸಿದ ಗ್ರೀನ್‌ ಸಿಟಿ ಫೋರಂ ಸದಸ್ಯರು   

ಮಡಿಕೇರಿ: ಇಲ್ಲಿನ ಪ್ರಸಿದ್ಧ ‍ಪ್ರವಾಸಿ ತಾಣರಾಜಾಸೀಟ್ ಉದ್ಯಾನದ ಪ್ರವೇಶ ದ್ವಾರದ ಬಳಿಯಿದ್ದ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಡಿದು ಹಾಕಿರುವ ಕ್ರಮವನ್ನು ಖಂಡಿಸಿ, ಉದ್ಯಾನದ ಎದುರು ‘ಗ್ರೀನ್‌ ಸಿಟಿ ಫೋರಂ’ ಸದಸ್ಯರು ಬುಧವಾರ ಪ್ರತಿಭಟಿಸಿದರು.

ಉದ್ಯಾನ ಅಭಿವೃದ್ಧಿ ಹಾಗೂ ಅಪಾಯದ ನೆಪವೊಡ್ಡಿ ಮರ ತೆರವು ಮಾಡಲಾಗಿದೆ. ಪರಿಸರ ಸಂರಕ್ಷಣೆ ಮಾಡಬೇಕಾದ ಅರಣ್ಯಾಧಿಕಾರಿಗಳೇ ನೇತೃತ್ವ ವಹಿಸಿ, ಮರ ಕಡಿದು ಹಾಕಿಸಿದ್ದಾರೆ ಎಂದು ಫೋರಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬೇಸಿಗೆಯಲ್ಲಿ ಪ್ರವಾಸಿಗರು ಸೇರಿದಂತೆ ಸ್ಥಳೀಯರಿಗೆ ನೆರಳು ನೀಡುತ್ತಿದ್ದ ಮರಗಳನ್ನು ತೆರವು ಮಾಡಲಾಗಿದೆ. ಹಿಂದಿನ ಉದ್ದೇಶವಾದರೂ ಏನು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಬಂದ ಮಡಿಕೇರಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್‌ ಉದ್ಯಾನದಲ್ಲಿ 15 ಗಿಡಗಳನ್ನು ನೆಡಲಾಗುವುದು ಎಂದು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.

ಮಳೆಗಾಲದಲ್ಲಿ ಬೀಳುವ ಹಾಗೂ ಹಳೆಯ ಮರಗಳನ್ನು ಗುರುತಿಸಿ ತೆರವು ಮಾಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದರು. ಅದರಂತೆ ಅಪಾಯಕಾರಿ ಮರಗಳನ್ನು ಮಾತ್ರ ತೆರವು ಮಾಡಲಾಗಿದೆ ಎಂದು ಡಿಎಫ್‌ಒ ಹೇಳಿದರು.

ಕಳೆದ ವರ್ಷದ ಪ್ರಕೃತಿ ವಿಕೋಪದ ವೇಳೆ ಅಪಾಯದ ಸ್ಥಳದಲ್ಲಿದ್ದ ಮರಗಳು ಬಿದ್ದು ಅನಾಹುತ ಸಂಭವಿಸಿತ್ತು. ಅದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟನೆ ನೀಡಿದರು.

ಉದ್ಯಾನದ ಸುತ್ತ ಎಂಟು ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆ ಉದ್ದೇಶಿಸಿತ್ತು. ಸದ್ಯಕ್ಕೆ ನಾಲ್ಕು ಮರಗಳನ್ನು ತೆರವು ಮಾಡಿದ್ದು ಪ್ರತಿಭಟನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ತೆರವು ಕಾರ್ಯ ಸ್ಥಗಿತಗೊಳಿಸಲಾಗಿದೆ.

ಫೋರಂ ಅಧ್ಯಕ್ಷ ಜಯಚಿಣ್ಣಪ್ಪ, ಕಾರ್ಯದರ್ಶಿ ಕೂಳಕಂಡ ರಾಜೇಶ್, ನಿರ್ದೇಶಕರಾದ ಕೃಷ್ಣಮೂರ್ತಿ, ಮೋಂತಿ ಗಣೇಶ್, ಮಾದೇಟಿರ ತಿಮ್ಮಯ್ಯ, ಅಂಬೆಕಲ್ಲು ನವೀನ್ ಕುಶಾಲಪ್ಪ, ಅಜ್ಜಮಾಡ ರಮೇಶ್‌ ಕುಟ್ಟಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.