
ಯಲಹಂಕ: ಜನರು ಹಾಗೂ ಸರ್ಕಾರವನ್ನು ಪ್ರಭಾವಿಸುವಷ್ಟು ಎತ್ತರಕ್ಕೆ ಬೆಳೆದ ನಟ ಡಾ.ರಾಜ್ಕುಮಾರ್ ಅವರು ತಳವರ್ಗದ, ಕಾರ್ಮಿಕ ವರ್ಗದ ಸಾಂಸ್ಕೃತಿಕ ನಾಯಕರಾಗಿದ್ದರು ಎಂದು ನಾಟಕಕಾರ, ಕವಿ ಕೆ.ವೈ.ನಾರಾಯಣಸ್ವಾಮಿ ಹೇಳಿದರು.
ಹೆಸರಘಟ್ಟ ಸಾಹಿತ್ಯ ಸಹೃದಯ ವೇದಿಕೆ ಹಾಗೂ ಕೌದಿ ಪ್ರಕಾಶನದ ವತಿಯಿಂದ ಭಾನುವಾರ ಇಲ್ಲಿ ನಡೆದ ಪ್ರಗತಿಪರ ಚಿಂತಕ ಮಂಜುನಾಥ ಎಂ.ಅದ್ದೆ ಅವರ ಸಂಶೋಧನಾ ಕೃತಿ ‘ಬಡವರ ರಾಜಕುಮಾರ’ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
20ನೇ ಶತಮಾನದಲ್ಲಿ ಕರ್ನಾಟಕವನ್ನು ಭಾವನಾತ್ಮಕವಾಗಿ ಮತ್ತು ಅಖಂಡವಾಗಿ ಪ್ರಭಾವಿಸಿದ ವ್ಯಕ್ತಿತ್ವವನ್ನು ರಾಜ್ಕುಮಾರ್ ಹೊಂದಿದ್ದರು. ತಮ್ಮ ಚಿತ್ರಗಳ ಮೂಲಕ ಬಡವರಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಜಾಗೃತಗೊಳಿಸಿದ್ದರು. ಯಜಮಾನಿಕೆ, ಸಾಮಾಜಿಕ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವಂತೆ ಮಾಡಿರುವ ಅವರ ಚಿತ್ರಗಳನ್ನು ಮನರಂಜನೆಯಾಗಿಯಷ್ಟೇ ನೋಡದೆ ಸಾಮಾಜಿಕ ಪಠ್ಯವಾಗಿ ಅಧ್ಯಯನ ಮಾಡಿ ಬರೆದಿರುವ ಪುಸ್ತಕ ‘ಬಡವರ ರಾಜಕುಮಾರ’. ಇದು ಸಿನಿಮಾ ವಿಮರ್ಶೆಗೆ ಹೊಸ ಅಯಾಮ, ಹೊಸ ಸ್ಪರ್ಶವನ್ನು ನೀಡಿದೆ ಎಂದರು.
ಲೇಖಕಿ ಡಾ.ವಸುಂಧರಾ ಭೂಪತಿ ಮಾತನಾಡಿ, ‘ಕನ್ನಡ ರಂಗಭೂಮಿ, ಸಿನಿಮಾ ಎರಡನ್ನೂ ಸಂಗಮಿಸಿದ ಮಹಾನ್ ನಟ ರಾಜ್ಕುಮಾರ್. ಸಿನಿಮಾ ಜಗತ್ತಿನಲ್ಲಿ ನವರಸಗಳನ್ನು ತಮ್ಮ ಅಭಿನಯದ ಮೂಲಕ ಸಮರ್ಥವಾಗಿ ತೋರಿಸಿಕೊಟ್ಟ ಅವರ ಚಿತ್ರಗಳು ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ’ ಎಂದರು.
ಪುಸ್ತಕ ಜನಾರ್ಪಣೆ ಮಾಡಿದ ರಾಜ್ಯಸಭೆಯ ಮಾಜಿ ಸದಸ್ಯ, ಕವಿ ಎಲ್.ಹನುಮಂತಯ್ಯ, ‘ರಾಜ್ಕುಮಾರ್ ಅವರು ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರು ಅದರಿಂದ ಪಡೆಯುತ್ತಿದ್ದ ಹಣವನ್ನು ಸ್ವಂತಕ್ಕೆ ಬಳಸದೆ ಅನಾಥಾಶ್ರಮಕ್ಕೆ ನೀಡುತ್ತಿದ್ದ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ತಾವು ನಟಿಸುತ್ತಿದ್ದ ಸಿನಿಮಾಗಳಲ್ಲಿ ಸಾಮಾಜಿಕ ಮೌಲ್ಯ, ಆದರ್ಶಗಳು ಇರಬೇಕು ಎಂದು ಸದಾ ಭಾವಿಸುತ್ತಿದ್ದರು’ ಎಂದು ಸ್ಮರಿಸಿದರು.
ಸಮಾರಂಭದಲ್ಲಿ ಮಂಜುನಾಥ ಎಂ.ಅದ್ದೆ, ಕಾಂಗ್ರೆಸ್ ಮುಖಂಡ ನಟರಾಜಗೌಡ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಾಜೀದ್, ಕೌದಿ ಪ್ರಕಾಶನದ ಕೆ.ಎನ್.ಮಮತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.