ADVERTISEMENT

‘ಬೆಂಗಳೂರಿನಲ್ಲಿ ಸುಪ್ರೀಂಕೋರ್ಟ್‌ ಪೀಠ ಸ್ಥಾಪಿಸಿ’–ಕೆ.ಸಿ. ರಾಮಮೂರ್ತಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 19:55 IST
Last Updated 18 ಮಾರ್ಚ್ 2021, 19:55 IST
ಕೆ.ಸಿ. ರಾಮಮೂರ್ತಿ
ಕೆ.ಸಿ. ರಾಮಮೂರ್ತಿ   

ಬೆಂಗಳೂರು: ದೇಶದ ಸುಪ್ರೀಂ ಕೋರ್ಟ್‌ ಮೇಲಿನ ಒತ್ತಡ ಕಡಿಮೆಯಾಗಬೇಕು ಎಂದರೆ ದೇಶದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಸುಪ್ರೀಂಕೋರ್ಟ್‌ನ ಪೀಠಗಳು ಸ್ಥಾಪನೆಯಾಗಬೇಕು. ದಕ್ಷಿಣದಲ್ಲಿ ‘ಸುಪ್ರೀಂ’ ಪೀಠ ಸ್ಥಾಪಿಸಲು ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಕೇಂದ್ರ ಕಾನೂನು ಸಚಿವರಲ್ಲಿ ಮನವಿ ಮಾಡಿದರು.

ರಾಜ್ಯಸಭೆಯಲ್ಲಿ ಗುರುವಾರ ಈ ವಿಷಯ ಪ್ರಸ್ತಾಪಿಸಿದ ಅವರು, ‘ರಾಜ್ಯದ ಅಥವಾ ದಕ್ಷಿಣ ಭಾರತದ ಜನ ದೆಹಲಿಗೆ ಬರುವುದ ಕಷ್ಟವಾಗುತ್ತದೆ. ಬೆಂಗಳೂರಿನಲ್ಲಿ ಪೀಠ ಸ್ಥಾಪಿಸಲು ಎಲ್ಲ ಅಗತ್ಯ ಮೂಲಸೌಲಭ್ಯ, ನ್ಯಾಯಾಂಗ ಮತ್ತು ಇತರೆ ಎಲ್ಲ ಸೌಲಭ್ಯಗಳು ಇವೆ’ ಎಂದು ಹೇಳಿದರು.

‘ರಾಜ್ಯಗಳಲ್ಲಿ ಹೈಕೋರ್ಟ್‌ ಪೀಠಗಳನ್ನು ಸ್ಥಾಪಿಸಿದ ನಂತರ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ನ್ಯಾಯದಾನ ಪ್ರಕ್ರಿಯೆ ತ್ವರಿತ ಗತಿಯಲ್ಲಿ ಆಗುತ್ತಿದೆ. ಅದೇ ರೀತಿ, ಸುಪ್ರೀಂಕೋರ್ಟ್‌ ಮೇಲಿನ ಒತ್ತಡ ಕಡಿಮೆಯಾಗಬೇಕು ಎಂದರೆ ಇಂತಹ ಪೀಠಗಳನ್ನು ನಿರ್ಮಾಣ ಮಾಡಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆ ಇಡಬೇಕು’ ಎಂದು ಪೀಠದ ಗಮನ ಸೆಳೆದರು.

ADVERTISEMENT

‘ಸುಪ್ರೀಂ ಕೋರ್ಟ್‌ನಲ್ಲಿ ಸಾಕಷ್ಟು ಪ್ರಕರಣಗಳು ಬಾಕಿ ಇದ್ದು, ಸಕಾಲಕ್ಕೆ ವಿಲೇವಾರಿ ಆಗುತ್ತಿಲ್ಲ. ಪ್ರಕರಣಗಳು ತ್ವರಿತಗತಿಯಲ್ಲಿ ಇತ್ಯರ್ಥ ಆದರೆ ಜನರಿಗೆ ಬೇಗ ನ್ಯಾಯ ಸಿಗಲಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.