ಬೆಂಗಳೂರು: ಈ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ಗೆ ವಿವಿಧ ಕ್ಷೇತ್ರಗಳ ಗಣ್ಯರ ಆಯ್ಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ 30 ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ.
ಈ ವರ್ಷ 66 ಸಾಧಕರನ್ನು ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಈ ಸಂಬಂಧ ಸಾರ್ವಜನಿಕರಿಗೆ ಕೂಡ ಸಾಧಕರ ಹೆಸರನ್ನು ಆನ್ಲೈನ್ ವೇದಿಕೆಯ ಮೂಲಕ ಶಿಫಾರಸು ಮಾಡಲು ಅವಕಾಶ ನೀಡಲಾಗಿದೆ.ಅ.15 ಶಿಫಾರಸು ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ.
ಸಲಹಾ ಸಮಿತಿ ಸದಸ್ಯರು: ಎಸ್.ಎನ್. ಸೇತುರಾಂ (ರಂಗಭೂಮಿ, ಚಲನಚಿತ್ರ), ಕೆ.ವಿ. ಸುಬ್ರಹ್ಮಣ್ಯ (ಪತ್ರಿಕಾರಂಗ), ವಿ. ಮನೋಹರ್ (ಚಲನಚಿತ್ರ), ಟೈಗರ್ ಅಶೋಕ್ ಕುಮಾರ್ (ಪೊಲೀಸ್), ಡಾ. ಶಿವಲಿಂಗಯ್ಯ (ಶಿಕ್ಷಣ), ಅವಿನಾಶ್ (ಚಲನಚಿತ್ರ), ಡಾ. ಈರೇಶಿ (ಶಿಕ್ಷಣ), ಡಾ. ನೇಮಿಚಂದ್ರ (ವಿಜ್ಞಾನ), ಬಾಬುರಾವ್ ಮುಡಬಿ (ಸಾಮಾಜಿಕ), ವನಜಾ ಶ್ರೀರಾಮ್ (ಶಿಕ್ಷಣ) ಹಾಗೂ ಹರೀಶ್ ಶ್ರೀರಾಮ್ (ಕ್ರೀಡೆ) ಬೆಂಗಳೂರಿನವರು.
ಉಡುಪಿಯ ಡಾ. ಕೃಷ್ಣಪ್ರಸಾದ್ ಕೂಡ್ಲು (ವೈದ್ಯಕೀಯ), ಕಲಬುರ್ಗಿಯ ಪ್ರೊ.ಎಸ್.ಎ. ಪಾಟೀಲ (ಶಿಕ್ಷಣ), ಮೂಡುಬಿದಿರೆಯ ಎಂ. ಮೋಹನ ಆಳ್ವ (ಶಿಕ್ಷಣ, ಸಾಂಸ್ಕೃತಿಕ), ಕೊಡಗಿನ ಎಂ.ಪಿ. ಗಣೇಶ್ (ಕ್ರೀಡೆ), ಬೆಳಗಾವಿಯ ಬ್ರಿಗೇಡಿಯರ್ ಪೂರ್ವಿಮಠ (ಸೇನೆ), ಮೈಸೂರಿನ ಮಹೇಶ್ವರನ್ (ಕುಸ್ತಿ), ಬಳ್ಳಾರಿಯ ದಾದಾ ಖಲಂದರ್ (ಸಾಮಾಜಿಕ), ಹುಬ್ಬಳ್ಳಿಯ ಕೆ.ಎಸ್. ಜಯಂತ್ (ಸಾಮಾಜಿಕ), ಬಾಗಲಕೋಟೆಯ ಘನಶಾಮ್ ಭಾಂಡಗೆ (ಸಿನಿಮಾ, ಸಾಮಾಜಿಕ), ದಾವಣಗೆರೆಯ ಬಿ. ಶಂಭುಲಿಂಗಪ್ಪ (ಸಂಕಿರ್ಣ), ಶಿವಮೊಗ್ಗದ ಶಿವಣ್ಣ (ಸಾಹಿತ್ಯ), ಉತ್ತರ ಕನ್ನಡದ ನಾಗರಾಜ್ ನಾಯಕ್ (ಪರಿಸರ, ಸಾಹಿತ್ಯ), ಶಿವಮೊಗ್ಗದ ಇ. ಪ್ರೇಮಾ (ಸಾಮಾಜಿಕ) ಸದಸ್ಯರಾಗಿ ನೇಮಕರಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಅವರೂ ಸಲಹಾ ಸಮಿತಿ ಸದಸ್ಯರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.