ಬೆಂಗಳೂರು:‘ಜುಲೈ 15ರವರೆಗೆ(ಸೋಮವಾರ) ನಾನು ರಾಜಕೀಯ ವಿಚಾರ ಮಾತನಾಡಲ್ಲ. ಅಧಿವೇಶನಕ್ಕೆ ಹೋಗ್ತೀನಿ. ಜುಲೈ 15ರಂದು ಭೇಟಿಯಾಗುವಂತೆ ಸ್ಪೀಕರ್ ಕರೆದಿದ್ದಾರೆ. ಅವರನ್ನೂ ಭೇಟಿಯಾಗ್ತೀನಿ’ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಹೇಳಿದರು.
ತಮ್ಮ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿದ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,‘ನಾನು ಯಾವ ಶಾಸಕರಿಗೂ ರಾಜೀನಾಮೆ ಕೊಡು ಅಂತ ಹೇಳಿಲ್ಲ.ನಮ್ಮ ಮನೆಗೆ ಬಿಜೆಪಿ ನಾಯಕರು ಬಂದಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ನಮ್ಮ ಮನೆಗೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಕಮ್ಯುನಿಸ್ಟ್ ಸೇರಿದಂತೆ ಹಲವು ಪಕ್ಷಗಳ ನಾಯಕರು ಬರ್ತಾರೆ. ಯಾವ ಮುಖಂಡರೂ ಯಾವ ಮನೆಗೆ ಹೋಗಿದ್ದಾರೋ ನನಗೆ ಗೊತ್ತಿಲ್ಲ’ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ರಾಮಲಿಂಗಾರೆಡ್ಡಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಪ್ರತಿಕ್ರಿಯಿಸಿದ ಎಸ್.ಆರ್.ವಿಶ್ವನಾಥ್, ‘ರಾಮಲಿಂಗಾರೆಡ್ಡಿ ಬಂಡೆ ಇದ್ದಂತೆ. ತಮ್ಮ ಸ್ವಂತ ನಿರ್ಧಾರದ ಮೇಲೆ ಮುನ್ನಡೆಯುತ್ತಾರೆ. ಅವರನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.