ADVERTISEMENT

ಸಿ.ಡಿ.ಪ್ರಕರಣ: ನ್ಯಾಯಾಧೀಶರ ಎದುರು ಸಂತ್ರಸ್ತೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 21:52 IST
Last Updated 5 ಏಪ್ರಿಲ್ 2021, 21:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಯುವತಿ, ತಮ್ಮ ಪೋಷಕರು ನೀಡಿದ್ದ ಅ‍ಪಹರಣ ಪ್ರಕರಣದ ವಿಚಾರಣೆಗಾಗಿ ನಗರದ 32ನೇ ಎಸಿಎಂಎಂ ನ್ಯಾಯಾಲಯದ ಎದುರು ಸೋಮವಾರ ಹಾಜರಾದರು.

‘ನನ್ನ ಮಗಳನ್ನು ಅಪಹರಣ ಮಾಡಿ ಅಕ್ರಮ ಬಂಧನದಲ್ಲಿರಿಸಲಾಗಿದೆ’ ಎಂದು ಆರೋಪಿಸಿದ್ದ ಯುವತಿ ಪೋಷಕರು, ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದರು. ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಕರಣವನ್ನು ಯುವತಿ ವಾಸವಿದ್ದ ಪ್ರದೇಶ ವ್ಯಾಪ್ತಿಯ ಬೆಂಗಳೂರಿನ ಆರ್‌.ಟಿ.ನಗರ ಠಾಣೆಗೆ ವರ್ಗಾಯಿಸಿದ್ದರು.

ಪ್ರಕರಣದ ತನಿಖೆ ಜವಾಬ್ದಾರಿಯನ್ನು ಎಸ್‌ಐಟಿಗೆ ವಹಿಸಲಾಗಿತ್ತು. ‘ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ಪೋಷಕರ ಮೇಲೆಯೇ ಒತ್ತಡ ಹಾಕಿ, ಈ ದೂರು ಕೊಡಿಸಲಾಗಿದೆ’ ಎಂಬುದಾಗಿ ಯುವತಿ, ತನಿಖಾಧಿಕಾರಿಯೂ ಆದ ಎಸಿಪಿ ನಾಗರಾಜ್ ಎದುರು ಹೇಳಿಕೆ ದಾಖಲಿಸಿದ್ದರು.

ADVERTISEMENT

ಹೇಳಿಕೆಯನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದ ತನಿಖಾಧಿಕಾರಿ, ಯುವತಿಯನ್ನೇ ನ್ಯಾಯಾಲಯಕ್ಕೆ
ಕರೆಸಿ ಹೇಳಿಕೆ ದಾಖಲಿಸಿಕೊಳ್ಳಲು ಅವಕಾಶ ಕೋರಿದ್ದರು. ಅದಕ್ಕೆ 32ನೇ ಎಸಿಎಂಎಂ ನ್ಯಾಯಾಲಯ, ಅನುಮತಿ ನೀಡಿತ್ತು.

ವಿಶೇಷ ನ್ಯಾಯಾಲಯದಲ್ಲಿ ಹೇಳಿಕೆ ದಾಖಲು: ಗುರುನಾನಕ್ ಭವನ ಬಳಿಯ ವಿಶೇಷ ನ್ಯಾಯಾಲಯದಲ್ಲೇ ಯುವತಿ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಹೇಳಿಕೆಯನ್ನು ನ್ಯಾಯಾಲಯ, ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗೆ ತಲುಪಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.