ಬೆಳಗಾವಿ: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿ, ನಾಲ್ಕು ದಿನ ಕಾಯಿರಿ’ ಎಂದು ಕುತೂಹಲ ಮೂಡಿಸಿರುವ ಗೋಕಾಕ ಶಾಸಕ, ಕಾಂಗ್ರೆಸ್ನ ರಮೇಶ ಜಾರಕಿಹೊಳಿ ಗುರುವಾರವೂ ಸಂಪರ್ಕಕ್ಕೆ ಸಿಗಲಿಲ್ಲ. ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿಗಾಗಿ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಮುಖಂಡರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರೊಂದಿಗೆ ಮಾತನಾಡಲು ಯತ್ನಿಸುತ್ತಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಯಾವ ಮುಖಂಡರಿಗೂ ಲಭ್ಯವಾಗಿಲ್ಲ. ಅವರ ಸೋದರ, ಉದ್ಯಮಿ ಲಖನ್ ಜಾರಕಿಹೊಳಿ ಮೂಲಕ ರಮೇಶ ಅವರನ್ನು ಸಂಪರ್ಕಿಸುವ ಮುಖಂಡರ ಯತ್ನವೂ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ, ಅವರ ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ. ಸಮ್ಮಿಶ್ರ ಸರ್ಕಾರಕ್ಕೆ ಆತಂಕವನ್ನೂ ತಂದೊಡ್ಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಅಲ್ಲಿನ ವಾಲ್ಮೀಕಿ ಸಮಾಜದ ಮುಖಂಡರ ಮೂಲಕ ಬಿಜೆಪಿ ಸೇರ್ಪಡೆ ಯತ್ನದಲ್ಲಿದ್ದಾರೆ. ಹೀಗಾಗಿ, ಅವರು ಕಾಂಗ್ರೆಸ್ ಮುಖಂಡರ ಕರೆಗಳಿಗೆ ಸ್ಪಂದನೆ ತೋರುತ್ತಿಲ್ಲ ಎನ್ನಲಾಗುತ್ತಿದೆ.
ಅವರ ಮೊಬೈಲ್ ಸಂಖ್ಯೆ ಗುರುವಾರವೂ ಸ್ವಿಚ್ಡ್ಆಫ್ ಆಗಿತ್ತು.
ಈ ನಡುವೆ, ಅಥಣಿಯಲ್ಲಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ‘ಅವರು ಯಾರನ್ನೋ ಭೇಟಿಯಾಗಲು ಹೋಗಿರಬಹುದು’ ಎಂದು ಹೇಳಿಕೆ ನೀಡಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ..
2–3 ದಿನದಲ್ಲಿ ರಮೇಶ ಜಾರಕಿಹೊಳಿ ಜತೆ ಚರ್ಚೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.