ADVERTISEMENT

ಸಿ.ಡಿ ಪ್ರಕರಣ: ರಕ್ಷಣೆಗೆ ಪ್ರಧಾನಿ ಮೊರೆ ಹೋಗಿ, ಸಂತ್ರಸ್ತೆಗೆ ಕುಮಾರಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 20:34 IST
Last Updated 25 ಮಾರ್ಚ್ 2021, 20:34 IST
ಕುಮಾರಸ್ವಾಮಿ (ಪ್ರಜಾವಾಣಿ ಸಂಗ್ರಹ ಚಿತ್ರ)
ಕುಮಾರಸ್ವಾಮಿ (ಪ್ರಜಾವಾಣಿ ಸಂಗ್ರಹ ಚಿತ್ರ)   

ಬೀದರ್‌: ‘ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿ.ಡಿ. ಪ್ರಕರಣದ ಯುವತಿಯ ಜೀವಕ್ಕೆ ಅಪಾಯವಾಗುವ ಪರಿಸ್ಥಿತಿ ಬರಬಾರದು ಎಂದಾದರೆ ಗುಪ್ತ ಸ್ಥಳದಲ್ಲಿ ಕುಳಿತು ವಿಡಿಯೊ ಬಿಡುಗಡೆ ಮಾಡುವುದು ಬಿಡಬೇಕು. ನೇರವಾಗಿ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ರಕ್ಷಣೆ ಪಡೆಯಬೇಕು. ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ದರೆ ಪ್ರಧಾನಮಂತ್ರಿಗೆ ಸಂದೇಶ ಕಳುಹಿಸಿ ರಕ್ಷಣೆ ಪಡೆಯಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.

‘ಯುವತಿ ಹಾಗೂ ಅವರ ಕುಟುಂಬದವರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ. ಯುವತಿಯನ್ನು ಅಜ್ಞಾತ ಸ್ಥಳದಲ್ಲಿ ಬಿಜೆಪಿಯವರು ಇಟ್ಟುಕೊಂಡಿದ್ದಾರೋ ಅಥವಾ ಕಾಂಗ್ರೆಸ್‌ನವರು ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಒಟ್ಟಾರೆ ಆ ಹೆಣ್ಣುಮಗಳು ಯಾರದೋ ಕುತಂತ್ರಕ್ಕೆ ಒಳಗಾಗಿದ್ದಾಳೆ’ ಎಂದು ಬಸವಕಲ್ಯಾಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ರಾಜ್ಯ ರಾಜಕಾರಣ ನಗೆಪಾಟಲಿಗೆ ಗುರಿಯಾಗಿದೆ. ಸಿ.ಡಿ ಪ್ರಕರಣದ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಕೊಳಚೆಯಲ್ಲಿ ಬಿದ್ದಿದ್ದೇವೆ. ಅದನ್ನು ಸರಿಪಡಿಸಬೇಕಿದೆ’ ಎಂದರು.

‘ಎಸ್‌ಐಟಿ ರಾಜ್ಯ ಸರ್ಕಾರದ ಸಂಸ್ಥೆಯಾಗಿದೆ. ಬಿಜೆಪಿ ಸರ್ಕಾರ ಅದನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಯಾವ ರೀತಿ ಬಳಕೆ ಮಾಡಿಕೊಂಡಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಯುವತಿ ರಕ್ಷಣೆಗಾಗಿ ಪ್ರಧಾನಿಯ ಮೊರೆ ಹೋಗುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಕಲಬುರ್ಗಿಯಲ್ಲಿ ಮಾತನಾಡಿದ ಅವರು,‘ಸಂತ್ರಸ್ತ ಯುವತಿಗೆ ರಕ್ಷಣೆ ಬೇಕಿದ್ದರೆ ಸಭಾಧ್ಯಕ್ಷರ ಮುಂದೆ ಬಂದು ಮನವಿ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಎಲ್ಲೆಲ್ಲಿಂದಲೋ ವಿಡಿಯೊ ‌ಮಾಡಿ ಹೇಳಿಕೆ ಕೊಟ್ಟರೆ ಹೇಗೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.