ಗೋಕಾಕ: ‘ಆ ಯಮ್ಮನನ್ನು (ಲಕ್ಷ್ಮಿ ಹೆಬ್ಬಾಳಕರ) ಹೈದರಾಬಾದ್ಗೆ ಕರೆದಿದ್ದರೆ ನನ್ನ ಎರಡೂ ಮಕ್ಕಳು ಹಾಳಾಗಿ ಹೋಗಲಿ’ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಹೈದರಾಬಾದ್ ಕಥೆಯನ್ನು ಡಿಸೆಂಬರ್ 6ರಂದು ಪತ್ರಿಕಾಗೋಷ್ಠಿ ಕರೆದು ಎಳೆ ಎಳೆಯಾಗಿ ಬಿಡಿಸಿ ಹೇಳುವೆ’ ಎಂದು ತಿಳಿಸಿದರು.
‘ಅಥಣಿ, ಕಾಗವಾಡ ಚುನಾವಣಾ ಪ್ರಚಾರದಲ್ಲಿ ನನ್ನ ಬಗ್ಗೆ ಟೀಕೆ– ಟಿಪ್ಪಣಿಗಳು ನಡೆಯುತ್ತಿವೆ. ಡಿಸೆಂಬರ್ 6ರವರೆಗೆ ಏನೂ ಹೇಳುವುದಿಲ್ಲ. ಆ ನಂತರ ಎಲ್ಲದಕ್ಕೂ ಉತ್ತರ ನೀಡುವೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈಗಲೂ ನಮ್ಮ ನಾಯಕರಾಗಿದ್ದಾರೆ. ಆದರೆ, ಅವರು ನನ್ನ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡಬಾರದು. ಮಾಡಿದರೆ, ನಾವೂ ‘ಬಾಂಬ್’ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮತ್ತು ನಾವೆಲ್ಲರೂ ಕೂಡಿಕೊಂಡು ಕಾಂಗ್ರೆಸ್ ಕಟ್ಟಿದ್ದೇವೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಇಂದಿಗೂ ನನ್ನ ಆತ್ಮದಲ್ಲಿದ್ದಾರೆ. ಆದರೆ, ಈಗ ಹಿಂದಿನ ಕಾಂಗ್ರೆಸ್ ಉಳಿದಿಲ್ಲ. ಹಿಂದುಳಿದವರ ಮತ್ತು ಲಿಂಗಾಯತರ ನಡುವೆ ಜಗಳ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.