ಸುಳೇಬಾವಿ (ಬೆಳಗಾವಿ ತಾ.): ‘ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕರಿಗಿಂತ ನಾವು ₹10 ಕೋಟಿ ಜಾಸ್ತಿ ಖರ್ಚು ಮಾಡಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ. ಅವರು ಡಬ್ಬಿ, ಮಿಕ್ಸರ್ ಸೇರಿ ₹3,000 ಖರ್ಚು ಮಾಡುತ್ತಿದ್ದಾರೆ. ₹6,000 ಕಾಣಿಕೆ ಕೊಡುವ ತಾಕತ್ತು ನಮಗೂ ಇದೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಸುಳೇಬಾವಿ ಗ್ರಾಮದಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿಗಳ ಬಳಗದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪಕ್ಕದ ಮೋದಗಾ ಗ್ರಾಮದಲ್ಲಿ ಮಿಕ್ಸರ್ ಕೊಡುತ್ತಿದ್ದರು ನೀವು, ಈ ಕಾರ್ಯಕ್ರಮಕ್ಕೆ ಬಂದಿದ್ದೀರಿ. ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಧ್ವಜ ಹಾರಲಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ‘ಮಹಾನಾಯಕ’ ಬಂದಾಗ ಕಾಣಿಕೆ ಕೊಟ್ಟರೂ ಜನ ಸೇರಿರಲಿಲ್ಲ’ ಎಂದು ಅವರು ಡಿ.ಕೆ.ಶಿವಕುಮಾರ್ ಹೆಸರು ಹೇಳದೇ ಮೂದಲಿಸಿದರು.
‘ಈಗಿನ ಗ್ರಾಮೀಣ ಶಾಸಕರನ್ನು ನಾನೇ ಗೆಲ್ಲಿಸಿದ್ದೇನೆ. ಈಗ ನನಗೆ ತಿರುಗುಬಾಣವಾಗಿದೆ. ಅದು ಕೆಟ್ಟ ಹುಳ. ಅದನ್ನು ತೆಗೆದು ಹಾಕಲೇಬೇಕು. ಶಾಸಕರಾದ ಬಳಿಕ ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಈ ಶಾಸಕರನ್ನು ಕಿತ್ತೆಸೆಯಬೇಕಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.