ಬೆಂಗಳೂರು: ರಾಷ್ಟ್ರೋತ್ಥಾನ ಟ್ರಸ್ಟ್ನ ‘ಟೆಂತ್ ಶ್ಯೂರ್ ಪಾಸ್’ ಕಾರ್ಯಕ್ರಮದ ಅಡಿಯಲ್ಲಿ ತರಬೇತಿ ಪಡೆದಿದ್ದ ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
‘ಪರೀಕ್ಷೆ ಬರೆದಿದ್ದ 341 ಮಂದಿ ಪೈಕಿ 249 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 73ರಷ್ಟು ಫಲಿತಾಂಶ ಲಭಿಸಿದೆ. ಕುಂತೀಗ್ರಾಮ ಸೇವಾವಸತಿಯಲ್ಲಿ ವ್ಯಾಸಂಗ ಮಾಡಿದ್ದ ನರಸಿಂಹ 619 ಅಂಕ ಗಳಿಸಿದ್ದಾರೆ. ಐದು ಜನ 600ಕ್ಕಿಂತಲೂ ಅಧಿಕ, 32 ಮಂದಿ ಡಿಸ್ಟಿಂಕ್ಷನ್ ಹಾಗೂ 155 ಜನ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಉತ್ತೀರ್ಣರಾದವರಲ್ಲಿ 145 ಬಾಲಕಿಯರು ಹಾಗೂ 104 ಬಾಲಕರು ಸೇರಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.
‘ಕೋವಿಡ್ನಿಂದಾಗಿ ಸರ್ಕಾರಿ, ಅನುದಾನಿತ ಹಾಗೂ ಬಿಬಿಎಂಪಿ ಶಾಲೆಯ ವಿದ್ಯಾರ್ಥಿಗಳು ಭೌತಿಕ ಹಾಗೂ ಆನ್ಲೈನ್ ತರಗತಿಗಳಿಂದ ವಂಚಿತರಾಗಿದ್ದರು. ಈ ಮಕ್ಕಳಿಗೆ ಟ್ರಸ್ಟ್ನಿಂದ ‘ಟೆಂತ್ ಶ್ಯೂರ್ ಪಾಸ್’ ಕಾರ್ಯಕ್ರಮದ ಅಡಿಯಲ್ಲಿ ಉಚಿತವಾಗಿ ತರಬೇತಿ ನೀಡಲಾಗಿತ್ತು. ಈ ವರ್ಷದ ಜನವರಿಯಿಂದ ಮಾರ್ಚ್ವರೆಗೂ ಒಟ್ಟು 12 ಸೇವಾವಸತಿಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ‘2022–23ನೇ ಸಾಲಿನಲ್ಲಿ 20 ಸೇವಾವಸತಿಗಳಲ್ಲಿ ಒಟ್ಟು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಲು ನಿರ್ಧರಿಸಲಾಗಿದೆ’ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.