ಬೆಂಗಳೂರು: ರೈತರು ಬೆಳೆಯುವ ಉತ್ಪನ್ನಗಳು, ಗೋಸಾಕಾಣಿಕೆದಾರರ ಹಾಲು ಮತ್ತು ಅದರ ಉಪ ಉತ್ಪನ್ನಗಳಿಗೆ ಪರ್ಯಾಯವಾಗಿ ಅಂತಹ ವಸ್ತುಗಳು ವಿದೇಶದಿಂದ ನೇರಾನೇರ ಆಮದಾಗಲು ಅವಕಾಶ ನೀಡುವಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಡಿಯ (ಆರ್ಸಿಇಪಿ) ಉದ್ದೇಶಿತ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಗಂಭೀರ ಚರ್ಚೆಗೆ ಗ್ರಾಸವಾಗಿದೆ.
ಬಹುಸಂಖ್ಯಾತ ರೈತರು ಜೀವನಾಧಾರಕ್ಕೆ ನೆಚ್ಚಿಕೊಂಡಿರುವ ಅಡಿಕೆ, ರಬ್ಬರ್, ತೆಂಗು, ಕಾಳುಮೆಣಸು ಬೆಳೆಗಳು ಹಾಗೂ ಹೈನುಗಾರಿಕೆಗೆ ಈ ಒಪ್ಪಂದ ಮಾರಕವಾಗಲಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.
ದೇಶವ್ಯಾಪಿಯಾಗಿ ಕೃಷಿಕರು ಹೋರಾಟಕ್ಕೆ ಇಳಿದಿರುವಂತೆಯೇ, ಸ್ವದೇಶಿ ಜಾಗರಣ ಮಂಚ್ನಂತಹ ಸಂಘ ಪರಿವಾರದ ಸಂಘಟನೆಗಳೇ ಒಪ್ಪಂದದ ವಿರುದ್ಧ ತಿರುಗಿಬಿದ್ದಿವೆ. ಆದರೆ ಸರ್ಕಾರ ಮಾತ್ರ ಇದುವರೆಗೂ ತನ್ನ ಒಲವು, ನಿಲುವುಗಳನ್ನು ಬಹಿರಂಗಪಡಿಸಿಲ್ಲ.
ಆಮದು ಸುಂಕ ಭಾರಿ ಕಡಿತ: ಒಪ್ಪಂದ ಜಾರಿಗೆ ಬಂದರೆ ಚೀನಾದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ 80ರಷ್ಟು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ನಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಆಮದು ಸುಂಕವನ್ನು ಶೇ 86ರಷ್ಟು ಹಾಗೂ ಆಸಿಯಾನ್, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ 90ರಷ್ಟು ಕಡಿತಗೊಳಿಸಬೇಕಾಗುತ್ತದೆ.
ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿ ತನ್ನತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸದೆ ಇರುವುದು ಉದ್ಯಮ ವಲಯಕ್ಕೆ ಮಾರಕವಾದರೆ,ಬೀಜ, ಔಷಧಿ ಮತ್ತು ಕೃಷಿ ರಾಸಾಯನಿಕಗಳಿಗೆ ವ್ಯಾಪಾರ ಸಂಬಂಧಿತ ಬೌದ್ಧಿಕ ಸ್ವತ್ತಿನ ಹಕ್ಕು (ಟ್ರಿಪ್ಸ್) ಹಾಗೂಅಂತರರಾಷ್ಟ್ರೀಯ ಸಸ್ಯತಳಿ ಸಂರಕ್ಷಣಾ ಸಭೆಯ ದಾಖಲೆಗೆ (ಯುಪಿಒವಿ) ಹಾಕುವ ಸಹಿ ರೈತರಿಗೆ ಮಾರಕ.
ಪಾರದರ್ಶಕವಾಗಿ ನಡೆದುಕೊಳ್ಳದ ಸರ್ಕಾರ:ಸರ್ಕಾರ ಆರ್ಸಿಇಪಿ ಸಮಾಲೋಚನೆಗಳನ್ನು ಗೋಪ್ಯವಾಗಿ ನಡೆಸುತ್ತಿರುವುದು ಏಕೆ ಎಂಬುದೇ ದೊಡ್ಡ ಪ್ರಶ್ನೆ. ಸಂಸತ್ತಿನಲ್ಲಿ ಇದರ ಚರ್ಚೆ ಆಗಿಲ್ಲ,ಸಾರ್ವಜನಿಕವಾಗಿಯೂ ಇದರ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿಲ್ಲ.ಒಪ್ಪಂದದ ದಾಖಲೆಗಳು ಆಕಸ್ಮಿಕವಾಗಿ ‘ಸೋರಿಕೆ’ ಆಗಿದ್ದರಿಂದ ಈ ಗುಮ್ಮನ ಬಗ್ಗೆ ತಿಳಿಯುವಂತಾಗಿದೆ. ವಿಶೇಷವೆಂದರೆ ಒಪ್ಪಂದದ ಕುರಿತು 25 ಸುತ್ತುಗಳ ಚರ್ಚೆಗಳು ಮುಗಿದು ಹೋಗಿವೆ.
ಸದ್ಯದ ಒತ್ತಡದಿಂದಾಗಿಭಾರತ ಈ ಒಪ್ಪಂದಕ್ಕೆ ಈಗ ಸಹಿ ಹಾಕದೆಯೂ ಇರಬಹುದು. ಆದರೆ ಮುಂದೊಂದು ದಿನ ಸಹಿ ಹಾಕಲೂ
ಬಹುದು. ಇದರಿಂದ ದೊಡ್ಡ ಕಂಟಕವೇ ದೇಶಕ್ಕೆ ಎದುರಾಗಲಿದೆ. ಸಹಿ ಹಾಕುವುದಿಲ್ಲ ಎಂದಾದರೆ ಆ ನಿರ್ಧಾರಕ್ಕೆ ಬದ್ಧವಾಗಿರಬೇಕು ಎಂಬಮಾತು ಉದ್ಯಮವಲಯದಲ್ಲಿ ಕೇಳಿಬರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.