ಮಂಡ್ಯ: ಅಣ್ಣ ಡಾ.ಹರೀಶ್ ಅವರ ವರ್ಷದ ತಿಥಿ ದಿನವೇ ಅಂಬರೀಷ್ ಇಹಲೋಕ ತ್ಯಜಿಸಿದ್ದು ಕಾಕತಾಳೀಯ. ತಿಥಿ ಕಾರ್ಯಕ್ರಮದಲ್ಲಿ ಅಂಬರೀಷ್ ಕೂಡ ಪಾಲ್ಗೊಳ್ಳಬೇಕಾಗಿತ್ತು. ಆದರೆ, ಸಂಜೆಯ ವೇಳೆಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಸುದ್ದಿ ಬಂತು.
ತಿಥಿ ಅಂಗವಾಗಿ ಸಂಬಂಧಿಕರೆಲ್ಲರೂ ಮೈಸೂರಿಗೆ ಬಂದಿದ್ದರು. ಪತ್ನಿ ಸಮೇತ ಮೈಸೂರಿಗೆ ಬರುವುದಾಗಿ ಅಂಬರೀಷ್ ತಿಳಿಸಿದ್ದರು. ‘ಬೆಳಿಗ್ಗೆಯಿಂದಲೂ ಎಲ್ಲರೂ ಅಂಬರೀಷ್ ಬರುವಿಕೆಗಾಗಿ ಕಾಯುತ್ತಿದ್ದೆವು. ಆದರೆ, ಮಧ್ಯಾಹ್ನದ ವೇಳೆಗೆ ಅವರು ಬರುವುದಿಲ್ಲ ಎಂಬುದು ಗೊತ್ತಾಯಿತು. ಕಾರ್ಯ ಮುಗಿಸುವಂತೆ ತಿಳಿಸಿದ್ದರು. ಆಗ ಆರೋಗ್ಯ ಅಷ್ಟೊಂದು ಗಂಭೀರವಾಗಿರಲಿಲ್ಲ’ ಎಂದು ಅಂಬರೀಷ್ ಚಿಕ್ಕಪ್ಪನ ಮಗ ಅಮರ್ ಅವರ ಪತ್ನಿ ವಸಂತಾ ಹೇಳಿದರು.
ಮರುಗಿದ್ದರು: ಪಾಂಡವಪುರ ತಾಲ್ಲೂಕು ಕನಗನಮರಡಿ ಗ್ರಾಮದಲ್ಲಿ ಶನಿವಾರ ಸಂಭವಿಸಿದ ಬಸ್ ದುರಂತದಲ್ಲಿ 30 ಮಂದಿ ಮೃತಪಟ್ಟ ಸುದ್ದಿ ಕೇಳಿದ್ದ ಅಂಬರೀಷ್ ಮುಮ್ಮಲ ಮರುಗಿದ್ದರು. ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.