ಬೆಂಗಳೂರು: ರಾಜ್ಯದ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ಮಾರ್ಗದರ್ಶಿತ್ವವನ್ನು (ಮೆಂಟರಿಂಗ್) ಅಳವಡಿಸಿಕೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಣಯವನ್ನು ಶಿಕ್ಷಣ ತಜ್ಞರ ಸಭೆಯಲ್ಲಿ ಕೈಗೊಳ್ಳಲಾಯಿತು.
ಹೊಸದಾಗಿ ರಚಿಸಲಾಗಿರುವ ಮಾರ್ಗದರ್ಶಿತ್ವ ಸಮಿತಿಯ ಅಧ್ಯಕ್ಷರೂ ಆಗಿರುವ ಸರ್ಕಾರದ ಶೈಕ್ಷಣಿಕ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾರ್ಗದರ್ಶಿತ್ವವನ್ನು ಅಳವಡಿಸಿಕೊಳ್ಳಲು ಬೇಕಾದ ತಾತ್ವಿಕ ಹಾಗೂ ಶೈಕ್ಷಣಿಕ ಆಯಾಮಗಳ ಬಗ್ಗೆ ಚರ್ಚಿಸಲಾಯಿತು. ಕ್ರಿಯಾ ಚೌಕಟ್ಟು ರೂಪಿಸಲು ರಚಿಸಲಾದ ಸಮಿತಿ ಈ ಪ್ರಸ್ತಾವಗಳನ್ನು ಸರ್ವಾನುಮತದಿಂದ ಅಂಗೀಕರಿಸಿತು.
ದೂರವಾಣಿ ಮೂಲಕ ಸಲಹೆ ನೀಡಿದ ವಿಟಿಯು ವಿಶ್ರಾಂತ ಕುಲಪತಿ ಪ್ರೊ.ಖಿಂಚಾ ಅವರು ಜೀವನ ಕೌಶಲ ಮತ್ತು ವೃತ್ತಿನಿಷ್ಠೆ ತತ್ವಗಳನ್ನು ಎಐಸಿಟಿಇ ಪಠ್ಯಗಳಲ್ಲಿ ಸೇರಿಸಬೇಕು ಎಂದರು.
ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಅವರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಚಲಿತವಿರುವ ಮಾರ್ಗದರ್ಶಿತ್ವದ ಆಯಾಮಗಳನ್ನು ಪರಿಚಯಿಸಿದರು. ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್, ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಎಸ್.ಜಾಫೆಟ್ ಅವರು ವೃತ್ತಿಪರ ಶಿಕ್ಷಣ ಸಂಸ್ಥೆಗಳು ಮತ್ತು ಸಾಂಪ್ರದಾಯಿಕ ವಿದ್ಯಾಸಂಸ್ಥೆಗಳ ವಿಭಿನ್ನತೆಗೆ ಅನುಗುಣವಾಗಿ ಕ್ರಿಯಾ ಚೌಕಟ್ಟು ರಚಿಸಬೇಕು ಎಂದು ಸಲಹೆ ನೀಡಿದರು.
ರೇವಾ ವಿವಿ ಕುಲಾಧಿಪತಿ ಡಾ.ಶಾಮರಾಜು, ಇಂಡಿಯನ್ ಅಕಾಡೆಮಿ ಕಾಲೇಜಿನ ನಿರ್ದೇಶಕ ಡಾ.ಸೋಮಶೇಖರ್ ಇದ್ದರು. ಆರ್.ವಿ.ಶಿಕ್ಷಣ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ನಾಗರಾಜಯ್ಯ ಸಲಹೆಗಳನ್ನು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.