ADVERTISEMENT

ಮದ್ದೂರು: ಮುತ್ತಿನ ಪಲ್ಲಕ್ಕಿ ಉತ್ಸವ ನಾಳೆ

ರೇಣುಕಾ ಎಲ್ಲಮ್ಮ ಜಾತ್ರೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 20:24 IST
Last Updated 17 ಫೆಬ್ರುವರಿ 2019, 20:24 IST
ರೇಣುಕಾ ಎಲ್ಲಮ್ಮ ದೇವಿಯ ಮೂಲ ವಿಗ್ರಹ
ರೇಣುಕಾ ಎಲ್ಲಮ್ಮ ದೇವಿಯ ಮೂಲ ವಿಗ್ರಹ   

ಮಂಡ್ಯ: ಮದ್ದೂರು ಹೊಳೆಬೀದಿ ಯಲ್ಲಿರುವ ರೇಣುಕಾ ಎಲ್ಲಮ್ಮ ದೇವಿ ಸೇವಾ ಟ್ರಸ್ಟ್‌ ವತಿಯಿಂದ ಫೆ.19ರಂದು ದೇವಿಯ 47ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ 20ನೇ ವರ್ಷದ ಮಹಾಚಂಡಿಕಾ ಹೋಮ ನಡೆಯಲಿದೆ.

ಫೆ.18ರಂದು ಸಂಜೆ 6 ಗಂಟೆಗೆ ಮೂಲದೇವರ ಅನುಜ್ಞೆ, ಭೂಶಾಂತಿ, ಗಣಪತಿ ಪೂಜೆ, ಗಂಗಾಪೂಜೆ, ಸ್ವಸ್ತಿವಾಚನ, ಪಂಚಗವ್ಯಾರಾಧನೆ, ದೇವನಾಂದಿ, ಋತ್ವಿಕ್‌ ವರ್ಣನೆ, ಕ್ಷೇತ್ರಪಾಲ ವಾಸ್ತೋಷ್ಪತಿ, ಪ್ರಾರ್ಥನೆ, ಕಳಶ ಸ್ಥಾಪನೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಫೆ.19ರಂದು ಬೆಳಿಗ್ಗೆ 7.30ಕ್ಕೆ ಮಹಾಚಂಡಿಕಾ ಹೋಮ, ಬೆಳಿಗ್ಗೆ 11.30ಕ್ಕೆ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ಹಾಗೂ ಮುತ್ತೈದೆಯರಿಂದ ತಂಬಿಟ್ಟಿನ ಆರತಿ ಕಾರ್ಯಕ್ರಮ ನಡೆಯಲಿವೆ. ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ.

ADVERTISEMENT

ಮಧ್ಯಾಹ್ನ 3.30ರಿಂದ ಸಂಜೆ 5 ಗಂಟೆಯವರೆಗೆ ರೇಣುಕಾ ಎಲ್ಲಮ್ಮ ದೇವಿಗೆ ನಿಂಬೆಹಣ್ಣಿನ ದೀಪದ ಆರತಿ ಮತ್ತು ಅಮ್ಮನವರ ಉಯ್ಯಾಲೆ ಉತ್ಸವ ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ದೇವಿಯನ್ನು ವಿವಿಧ ಪುಷ್ಪಗಳ ಅಲಂಕಾರದೊಂದಿಗೆ ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಗುವುದು.

ಫೆ.20ರಂದು ಬೆಳಿಗ್ಗೆ 6 ಗಂಟೆಗೆ ರೇಣುಕಾ ಎಲ್ಲಮ್ಮ ದೇವಿಯನ್ನು ದೇವಸ್ಥಾನದ ಮೂಲಸ್ಥಾನಕ್ಕೆ ಆಹ್ವಾನ ಮಾಡಲಾಗುವುದು. ನಂತರ ಪಂಚಗವ್ಯಾರಾಧನೆ, ಪುಣ್ಯಾಹವಾಚನ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ರೇಣುಕಾ ಎಲ್ಲಮ್ಮ ದೇವಿ ಸೇವಾ ಟ್ರಸ್ಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.