ಹೊನ್ನಾಳಿ: ‘ಮಸೀದಿಗಳಲ್ಲಿ ಪ್ರಾರ್ಥನೆಯ ಹೆಸರಿನಲ್ಲಿ ಮದ್ದುಗುಂಡು, ಬಂದೂಕುಗಳನ್ನು ಸಂಗ್ರಹಿಸಿ ಫತ್ವಾ ಹೊರಡಿಸುವ ಮೌಲಾಗಳೇ ನಿಮಗೆ ಎಚ್ಚರಿಕೆ’ ಎಂದು ಕಿಡಿ ಕಾರಿದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ‘ಬನ್ನಿ ನಮ್ಮ ಮಠ, ಮಂದಿರ, ದೇವಸ್ಥಾನಗಳಿಗೆ; ಅಲ್ಲಿ ತೀರ್ಥ, ಪ್ರಸಾದ ಬಿಟ್ಟರೆ ನಿಮಗೆ ಬೇರೇನೂ ಸಿಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಪಟ್ಟಣದ ಅಗಳ ಮೈದಾನದಲ್ಲಿ ತಾಲ್ಲೂಕು ಬಿಜೆಪಿ ಹಮ್ಮಿಕೊಂಡಿದ್ದ ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಇನ್ನು ಮುಂದೆ ನಾನು ಕೇಸರಿಮಯ ರಾಜಕಾರಣ ಮಾಡುತ್ತೇನೆ. ನಾನು ಹಿಂದುತ್ವವನ್ನು ಪ್ರೀತಿಸುತ್ತೇನೆ. ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ನನಗೆ ಹಾಗೂ ಸಿದ್ದೇಶಣ್ಣನಿಗೆ ಕೇವಲ 500ರಿಂದ 600 ಮತಗಳನ್ನು ಮುಸ್ಲಿಮರು ನೀಡಿದ್ದಾರೆ. ಆದರೂ ಭೇದಭಾವ ಮಾಡದೇ ಮಸೀದಿಗಳಿಗೆ, ಶಾದಿ ಮಹಲ್ಗಳಿಗೆ ಲಕ್ಷಾಂತರ ರೂಪಾಯಿ ಅನುದಾನ ಕೊಟ್ಟಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ₹ 250 ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದಾರೆ ಆದರೂ ನಮ್ಮನ್ನು ದೂರುವುದು ಏಕೆ’ ಎಂದು ಪ್ರಶ್ನಿಸಿದರು.
ಪೌರತ್ವ (ತಿದ್ದುಪಡಿ) ಕಾಯ್ದೆಯ ಅರ್ಥವೇ ಗೊತ್ತಿಲ್ಲದ ವಿರೋಧಿಗಳು ಬಹಿರಂಗ ಚರ್ಚೆಗೆ ಬರಬೇಕು ಎಂದು ಸವಾಲು ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.