ಬೊಮ್ಮನಹಳ್ಳಿ: ಕಂದಾಯ ನಿವೇಶನ ನೋಂದಣಿಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿರುವುದನ್ನು ಖಂಡಿಸಿ ಕಂದಾಯ ನಿವೇಶನದಾರರ ಸಂಘವು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
‘ವಸತಿ ಸಂಕೀರ್ಣಗಳ ಬಿಲ್ಡರ್ಗಳ ಒತ್ತಡಕ್ಕೆ ಮಣಿದು ಸಚಿವ ಆರ್.ಅಶೋಕ ಅವರು ಕಂದಾಯ ನಿವೇಶನ ನೋಂದಣಿಗೆ ತಡೆ ನೀಡಿದ್ದು, ಈ ನಿರ್ಧಾರದಲ್ಲಿ ಯಾವುದೇ ಸದುದ್ದೇಶವಿಲ್ಲ’ ಸಂಘದ ಪದಾಧಿಕಾರಿಗಳು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ನಗರದ ಜನತೆಗೆ ವಸತಿ ಕಲ್ಪಿಸಬೇಕಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಗೃಹ ಮಂಡಳಿಗೆ ಈವರೆಗೆ ಶೇಕಡ 30 ರಷ್ಟು ಜನರಿಗೂ ವಸತಿ ನೀಡಲು ಸಾಧ್ಯವಾಗಿಲ್ಲ. ಇವುಗಳೂ ಈಗ ದುಬಾರಿಯಾಗಿವೆ. ಇದೀಗ ಕಂದಾಯ ನಿವೇಶನಗಳ ನೋಂದಣಿಗೆ ನಿರ್ಬಂಧ ಹೇರಿಕೆಯಿಂದ ಸ್ವಂತ ಸೂರು ಹೊಂದುವ ನಗರದ ಜನರ ಕನಸು ಕಮರಿ ಹೋಗಲಿದೆ’ ಎಂದರು.
‘ಆರ್ಥಿಕವಾಗಿ ಹಿಂದುಳಿದ ಜನರು ಬಿಡಿಎ ಅಥವಾ ಖಾಸಗಿ ಅನುಮೋದಿತ ಲೇಔಟ್ಗಳಲ್ಲಿ ದುಬಾರಿ ಬೆಲೆ ತೆತ್ತು ನಿವೇಶನ ಖರೀದಿಸಲು ಸಾಧ್ಯವಾಗದ ಸ್ಥಿತಿ ಇದೆ. ಇಂತಹ ಜನರು ಅನಿವಾರ್ಯವಾಗಿ ಕಂದಾಯ ನಿವೇಶನಗಳನ್ನು ಖರೀದಿಸುತ್ತಾರೆ. ಹೀಗಾಗಿ ನೋಂದಣಿಗೆ ನಿರ್ಬಂಧ ಹಾಕಿರುವ ಕ್ರಮವು ಬಡಜನ ವಿರೋಧಿಯಾಗಿದೆ’ ಎಂದು ಕರ್ನಾಟಕ ರೆವಿನ್ಯೂ ನಿವೇಶನದಾರರ ಸಂಘದ ಅಧ್ಯಕ್ಷ ಆರ್.ಪ್ರಭಾಕರ್ ರೆಡ್ಡಿ ದೂರಿದ್ದಾರೆ.
ಇದುವರೆಗೆ ನೋಂದಣಿಯಾಗಿರುವ ರೆವಿನ್ಯೂ ನಿವೇಶನಗಳನ್ನು ಸಕ್ರಮಗೊಳಿಸಬೇಕು. ರಾಜಸ್ವ ಶುಲ್ಕವನ್ನು ಶೇಕಡ 3 ರಷ್ಟು ಇಳಿಸಬೇಕೆಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ಹೇಳಿ
ದರು. ಉಪಾಧ್ಯಕ್ಷ ಎಚ್.ಇ.ಕೃಷ್ಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.