ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ 139 ಸಂಘ ಸಂಸ್ಥೆಗಳಿಗೆ ಕಂದಾಯ ಇಲಾಖೆಯು 1,208 ಎಕರೆ ಜಾಗವನ್ನು ಗುತ್ತಿಗೆಗೆ ನೀಡಿದ್ದು, ಈ ಪೈಕಿ 12 ಸಂಘ ಸಂಸ್ಥೆಗಳು (149 ಎಕರೆ ಜಾಗ) ಗುತ್ತಿಗೆ
ಷರತ್ತನ್ನು ಉಲ್ಲಂಘಿಸಿವೆ. ಈ ಜಮೀನುಗಳ ಒಟ್ಟು ಮೌಲ್ಯ ₹1,500 ಕೋಟಿ ಎಂದು ಅಂದಾಜಿಸಲಾಗಿದೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ನ ಸಿ.ಎನ್.ಬಾಲಕೃಷ್ಣ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕಂದಾಯ ಸಚಿವ ಆರ್.ಅಶೋಕ, ‘ಅಕ್ರಮ ಸಕ್ರಮದಡಿ 94 ಸಿ ಹಾಗೂ 94 ಸಿಸಿ ಅಡಿ ಸರ್ಕಾರಿ ಶಾಲೆ, ಸ್ಮಶಾನ, ಅಂಗನವಾಡಿ, ದೇವಸ್ಥಾನ, ಮಾಜಿ ಸೈನಿಕರಿಗೆ ಸಮುದಾಯ ಭವನ, ಕಸ ಸಂಸ್ಕರಣಾ ಘಟಕ ನಿರ್ಮಾಣ ಹಾಗೂ ಆಶ್ರಯ ಯೋಜನೆಯಡಿ ಸಾರ್ವಜನಿಕ ಉದ್ದೇಶಕ್ಕೆ ಮತ್ತು ಸಂಘ ಸಂಸ್ಥೆಗಳಿಗೆ ಜಾಗ ಮಂಜೂರು ಮಾಡಲಾಗಿದೆ. ಗುತ್ತಿಗೆ ಷರತ್ತು ಉಲ್ಲಂಘಿಸಿರುವ ಸಂಸ್ಥೆಗಳಿಗೆ ನೋಟಿಸ್ ನೀಡಿ ಮಂಜೂರಾತಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದೂ ಉತ್ತರಿಸಿದ್ದಾರೆ.
ಕೆಲವು ಸಂಘ ಸಂಸ್ಥೆಗಳ ವಿರುದ್ಧ ವರದಿ ಸಲ್ಲಿಕೆಯಾಗಿ ಒಂದೂವರೆ ವರ್ಷ ಕಳೆದ ಬಳಿಕವೂ ಕಂದಾಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.
ಸಂಸ್ಕೃತ ವಿವಿಗೆ 100 ಎಕರೆ ಜಾಗ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಲು ಮಾಗಡಿಯ ತಿಪ್ಪಸಂದ್ರದಲ್ಲಿ 100 ಎಕರೆ ಜಾಗ ಮಂಜೂರು ಮಾಡಲಾಗಿದೆ. ಆದರೆ, ಈ ಜಾಗವನ್ನು ಮಂಜೂರಾತಿ ಉದ್ದೇಶಕ್ಕೆ ಬಳಸಿಕೊಂಡಿಲ್ಲ ಎಂದು ಅಶೋಕ ಉತ್ತರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.