ADVERTISEMENT

ಮಹಿಳೆಯ ಕೈ ಕಾಲು ಕಟ್ಟಿ ಚಿನ್ನ, ನಗದು ದರೋಡೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 18:42 IST
Last Updated 20 ಫೆಬ್ರುವರಿ 2019, 18:42 IST

ಜಯಪುರ (ಬಾಳೆಹೊನ್ನೂರು): ಪಟ್ಟಣದ ಅಲಗೇಶ್ವರ ರಸ್ತೆಯಲ್ಲಿರುವ ಹೋಟೆಲ್‌ಗೆ ಮಂಗಳವಾರ ರಾತ್ರಿ ಗಿರಾಕಿಗಳಂತೆ ಬಂದ ಇಬ್ಬರು ಆಗಂತುಕರು ಮಾಲಕಿಯ ಕೈ, ಕಾಲುಕಟ್ಟಿ ₹6 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ, ಬಟ್ಟೆ ಹಾಗೂ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಮಂಗಳವಾರ ರಾತ್ರಿ 9 ಗಂಟೆಗೆ ಒಂಟಿಯಾಗಿದ್ದ ಶಕುಂತಳಾ ಎಂಬುವವರ ಹೋಟೆಲ್‌ಗೆ ಒಬ್ಬ ಮಹಿಳೆ ಹಾಗೂ ಪುರುಷ ಗಿರಾಕಿಗಳಂತೆ ಬಂದು ಊಟ ಮಾಡಿದ್ದಾರೆ. ನಂತರ ಮಹಿಳೆ ಶೌಚಾಲಯಕ್ಕೆ ತೆರಳಲು ಮಾಲಕಿ ಬಳಿ ಅನುಮತಿ ಪಡೆದು ಒಳ ತೆರಳಿದ್ದಾರೆ. ಆ ವೇಳೆ ಹಿಂದಿನಿಂದ ಬಂದ ಪುರುಷ ಶಕುಂತಳಾ ಅವರನ್ನು ಅಲ್ಲೇ ಕೆಡವಿ, ಹೊಡೆದು ಬೀರುವಿನ ಬೀಗದ ಕೈ ಪಡೆದು ಅದರಲ್ಲಿದ್ದ ₹1.60 ಲಕ್ಷ ನಗದು, ₹3.9 ಲಕ್ಷ ಮೌಲ್ಯದ ಚಿನ್ನ, ₹60 ಸಾವಿರದ ಬೆಳ್ಳಿ ಒಡವೆ ಹಾಗೂ ಸುಮಾರು ₹15 ಸಾವಿರ ಮೌಲ್ಯದ ಬಟ್ಟೆಗಳನ್ನು ದೋಚಿದ್ದಾರೆ.

ನಂತರ ರಾತ್ರಿಯಿಂದ ಮುಂಜಾನೆ ನಾಲ್ಕು ಗಂಟೆವರೆಗೂ ಮಹಿಳೆಗೆ ಚಿತ್ರ ಹಿಂಸೆ ನೀಡಿ ಅವರ ಕಿವಿಯಲ್ಲಿದ್ದ ಓಲೆ, ಕತ್ತಿನಲ್ಲಿದ್ದ ಚೈನನ್ನು ಕಿತ್ತುಕೊಂಡಿದ್ದಾರೆ. ಮಹಿಳೆ ಸತ್ತಂತೆ ಮಲಗಿದ್ದನ್ನು ಕಂಡು ಬೆಳಗಿನ ಜಾವ ಕಳ್ಳರು ಪರಾರಿಯಾಗಿದ್ದಾರೆ. ಭಯಭೀತರಾದ ಮಹಿಳೆ ಮುಂಜಾನೆ ಕೂಗಿಕೊಂಡಾಗ ವಾಕಿಂಗ್‌ಗೆ ತೆರಳುತ್ತಿದ್ದ ಸ್ಟುಡಿಯೊ ಮಾಲೀಕ ರಮೇಶ್ ಎಂಬುವವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.