ADVERTISEMENT

ಛತ್ತೀಸಗಢದ ಸಾಧಕನಿಗೆ ರೋಹಿಣಿ ನಯ್ಯರ್‌ ‍ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 3:11 IST
Last Updated 1 ನವೆಂಬರ್ 2023, 3:11 IST
ದೀನನಾಥ ರಜಪೂತ್‌ ಅವರಿಗೆ ‘ರೋಹಿಣಿ ನಯ್ಯರ್‌ ಪ್ರಶಸ್ತಿ’ಯನ್ನು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್‌.ಕೆ.ಸಿಂಗ್‌ ಪ್ರದಾನ ಮಾಡಿದರು.
ದೀನನಾಥ ರಜಪೂತ್‌ ಅವರಿಗೆ ‘ರೋಹಿಣಿ ನಯ್ಯರ್‌ ಪ್ರಶಸ್ತಿ’ಯನ್ನು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್‌.ಕೆ.ಸಿಂಗ್‌ ಪ್ರದಾನ ಮಾಡಿದರು.   

ನವದೆಹಲಿ: ಛತ್ತೀಸಗಢದಲ್ಲಿ ಆದಿವಾಸಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸಾಮಾಜಿಕ ಕಾರ್ಯಕರ್ತ ದೀನನಾಥ ರಜಪೂತ್‌ ಅವರಿಗೆ ‘ರೋಹಿಣಿ ನಯ್ಯರ್‌ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್‌.ಕೆ.ಸಿಂಗ್‌ ಅವರು, ರೋಹಿಣಿ ನಯ್ಯರ್‌ ಪ್ರತಿಷ್ಠಾನದ ಆಶ್ರಯದಲ್ಲಿ ಇಲ್ಲಿನ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಮಾಡಿರುವ ಅನುಪಮ ಸೇವೆಗಾಗಿ ನೀಡುವ ಈ ಪ್ರಶಸ್ತಿಯು ₹10 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. 

ಪ್ರಶಸ್ತಿ ಪುರಸ್ಕೃತ ದೀನನಾಥ ರಜಪೂತ್‌, ‘2013ರಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಬೆಂಗಳೂರಿನಲ್ಲಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದೆ. ಆದರೆ, ಆ ಉದ್ಯೋಗದಲ್ಲಿ ತೃಪ್ತಿ ಸಿಗಲಿಲ್ಲ. ಗ್ರಾಮೀಣ ಜನರ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಆ ಉದ್ಯೋಗಕ್ಕೆ ರಾಜೀನಾಮೆ ನೀಡಿದೆ. ಕೃಷಿಕರ ಉತ್ಪನ್ನಗಳಿಗೆ ಉತ್ತಮ ದರ ಒದಗಿಸುವ ಉದ್ದೇಶದಿಂದ ಬಸ್ತಾರ್‌ ಜಿಲ್ಲೆಯಲ್ಲಿ 2018ರಲ್ಲಿ ಸಂಸ್ಥೆ ಆರಂಭಿಸಿದೆ. ಆರಂಭದಲ್ಲಿ 337 ಆದಿವಾಸಿ ಮಹಿಳೆಯರ ಕೃಷಿ ಉತ್ಪನ್ನಗಳಿಗೆ ಉತ್ತಮ ದರ ಒದಗಿಸಿ ಕೊಡಲಾಯಿತು. ಈಗ 6,100 ಕೃಷಿಕರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ’ ಎಂದರು. 

ADVERTISEMENT

ಪ್ರತಿಷ್ಠಾನದ ಅಧ್ಯಕ್ಷ ದೀಪಕ್‌ ನಯ್ಯರ್‌ ಮಾತನಾಡಿ, ‘2021ರ ಅಕ್ಟೋಬರ್‌ಲ್ಲಿ ನಿಧನರಾದ ಅರ್ಥಶಾಸ್ತ್ರಜ್ಞೆ ರೋಹಿಣಿ ನಯ್ಯರ್ ಅವರು ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಮಾಡಿರುವ ಮಹತ್ವದ ಕೆಲಸಗಳನ್ನು ಗೌರವಿಸುವ ದಿಸೆಯಲ್ಲಿ ಅವರ ಹೆಸರಿನಲ್ಲಿ ಪ್ರತೀವರ್ಷ ಪ್ರಶಸ್ತಿ ನೀಡಲಾಗುತ್ತಿದೆ. ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಮಹಿಳೆಯ ಹೆಸರಿನಲ್ಲಿ ನೀಡುತ್ತಿರುವ ಮೊದಲ ಪ್ರಶಸ್ತಿ ಇದಾಗಿದೆ. ಯುವ ಸಾಧಕರಿಗೆ ಗ್ರಾಮೀಣ ಕ್ಷೇತ್ರದಲ್ಲಿ ಕೆಲಸ ಮಾಡಲು ಈ ಪ್ರಶಸ್ತಿ ಇನ್ನಷ್ಟು ಉತ್ತೇಜನ ನೀಡಲಿದೆ. 40 ವರ್ಷದೊಳಗಿನ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.