ಮೈಸೂರು: ‘ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ಈಜುಕೊಳ ನಿರ್ಮಾಣಕ್ಕೆ ಕೋವಿಡ್ ಹಣದ ಬಳಕೆ ಆಗಿಲ್ಲ’ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟಪಡಿಸಿದ್ದಾರೆ.
‘ಕೋವಿಡ್ ಸಂಕಷ್ಟದ ಸಮಯದಲ್ಲಿ ಈಜುಕೊಳ ನಿರ್ಮಾಣ ಕೆಲಸ ಆಗಿಲ್ಲ. 2020ರ ಡಿಸೆಂಬರ್ನಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆ ಅವಧಿಯಲ್ಲಿ ಕೋವಿಡ್ ಎರಡನೇ ಅಲೆಯ ಯಾವುದೇ ಮುನ್ಸೂಚನೆ ಇರಲಿಲ್ಲ’ ಎಂದು ಮಾಧ್ಯಮಗಳ ವಾಟ್ಸ್ಆ್ಯಪ್ ಗ್ರೂಪ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಈಜುಕೊಳ ನಿರ್ಮಾಣ ಕುರಿತ ದೂರಿನ ಸಂಬಂಧ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅವರು ತನಿಖೆ ನಡೆಸಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದಾರೆ. ಈ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು.
ವರದಿಯಲ್ಲಿರುವ ಅಂಶಗಳ ಬಗ್ಗೆಯೂ ಸ್ಪಷ್ಟನೆ ನೀಡಿರುವ ರೋಹಿಣಿ, ‘ಈಜುಕೊಳ ನಿರ್ಮಾಣದ ಬಗ್ಗೆ ಕೆಲವರು ಮಾಡಿದ್ದ ಆರೋಪಗಳು ಸುಳ್ಳು ಆಗಿರುವ ಕಾರಣ ತನಿಖಾ ವರದಿಯಲ್ಲಿ ಒಂದಷ್ಟು ತಾಂತ್ರಿಕ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ನಿರ್ಮಿತಿ ಕೇಂದ್ರ ತನ್ನದೇ ಆದ ತಾಂತ್ರಿಕ ವಿಭಾಗವನ್ನು ಹೊಂದಿದ್ದು, ಈ ಯೋಜನೆಗೆ ಅನುಮೋದನೆ ನೀಡಿದೆ. ನಿರ್ಮಿತಿ ಕೇಂದ್ರದ ಕಾರ್ಯಕಾರಿ ಸಮಿತಿ ಆಡಳಿತಾತ್ಮಕ ಒಪ್ಪಿಗೆಯನ್ನೂ ನೀಡಿತ್ತು’ ಎಂದು ಹೇಳಿದ್ದಾರೆ.
ಎಲ್ಲ ಭೂ ಅಕ್ರಮಗಳ ಬಗ್ಗೆ ತನಿಖೆಯಾಗಲಿ: ‘ಮೈಸೂರಿನಲ್ಲಿ ಆಗಿರುವ ಭೂಹಗರಣಗಳ ಕುರಿತು ನಾನು ಮಾಡಿರುವ ಎಲ್ಲ ಆದೇಶಗಳ ಬಗ್ಗೆಯೂ ತನಿಖೆಮಾಡಬೇಕು. ರಾಜಕಾಲುವೆ ಒತ್ತುವರಿಮಾಡಿ ಸಾ.ರಾ. ಚೌಲ್ಟ್ರಿ ನಿರ್ಮಾಣ ಮಾಡಿದ ವಿಷಯಕ್ಕೆ ಮಾತ್ರ ತನಿಖೆಯನ್ನು ಸೀಮಿತಗೊಳಿಸಬಾರದು. ಇದ ರಿಂದ ಇತರ ಎಲ್ಲ ಭೂಹಗರಣಗಳು ಮುಚ್ಚಿಹೋಗುವ ಸಾಧ್ಯತೆಯಿದೆ’ ಎಂದುಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ರೂಪಾ ಮೌದ್ಗಿಲ್ ಟೀಕೆ
‘ಕೊರೊನಾ ಸಂಕಷ್ಟದಿಂದ ಜನರು ತತ್ತರಿಸಿರುವ ಸಂದರ್ಭದಲ್ಲಿ ಸಾರ್ವಜನಿಕರ ಹಣ ಬಳಸಿ ಈಜುಕೊಳ ನಿರ್ಮಿಸಲು ಮುಂದಾಗಿದ್ದು, ಐಐಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನೈತಿಕ ಪತನವನ್ನು ತೋರಿಸುತ್ತದೆ. ಈಜುಕೊಳ ನಿರ್ಮಾಣ ಕೆಲಸ ಮುಂದೂಡಬಹುದಿತ್ತು’ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ತಮ್ಮ ಫೇಸ್ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.