ADVERTISEMENT

‘ಮತ್ತೆ ರೋಹಿಣಿ ಸಿಂಧೂರಿ ಕರೆ ತನ್ನಿ' ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 9:23 IST
Last Updated 12 ಜೂನ್ 2021, 9:23 IST
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ   

ಮೈಸೂರು: ‘ಮತ್ತೆ ರೋಹಿಣಿ ಸಿಂಧೂರಿ ಕರೆ ತನ್ನಿ’ (ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ!) ಎಂಬ ಸಹಿ ಸಂಗ್ರಹ ಅಭಿಯಾನ ಆನ್‌ಲೈನ್‌ನಲ್ಲಿ ಶುರುವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆನ್‌ಲೈನ್‌ ಸಹಿ ಸಂಗ್ರಹ ವೇದಿಕೆಯಾಗಿರುವ ಚೇಂಜ್.ಆರ್ಗ್‌ (www.change.org) ಸಾಮಾಜಿಕ ಮಾಧ್ಯಮದಲ್ಲಿ ‘ಕನ್ಸರ್ನ್ಡ್‌ ಸಿಟಿಜನ್‌ ಆಫ್‌ ಇಂಡಿಯಾ’ ಎಂಬ ಹೆಸರಿನಲ್ಲಿ ಈ ಅಭಿಯಾನ ಆರಂಭವಾಗಿದ್ದು, ಇದುವರೆಗೆ 34,650 ಮಂದಿ ಸಹಿ ಹಾಕಿದ್ದಾರೆ. 35 ಸಾವಿರ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಸಿಂಧೂರಿ ಅವರನ್ನು ಮರಳಿ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ನೇಮಿಸುವಂತೆ ಮನವಿ ಮಾಡಲಾಗುತ್ತಿದೆ. ಜೊತೆಗೆ ಅವರನ್ನು ಬೆಂಬಲಿಸಿ ಕಮೆಂಟ್‌ಗಳನ್ನು ದಾಖಲಿಸಲಾಗುತ್ತಿದೆ.

ADVERTISEMENT

‘ಸಿಂಧೂರಿ ಅವರನ್ನು ತರಾತುರಿಯಲ್ಲಿ, ರಾಜಕಾರಣಿಗಳ ಒತ್ತಡದಿಂದ ಸರ್ಕಾರ ವರ್ಗಾವಣೆ ಮಾಡಿದೆ. ಭೂಮಾಫಿಯಾವೇ ಇದಕ್ಕೆ ಕಾರಣ. ಭೂಮಾಫಿಯಾದ ಬಗ್ಗೆ ವರದಿ ನೀಡಲು ಸಮಯಾವಕಾಶವನ್ನೇ ನೀಡಲಿಲ್ಲ. ಮೈಸೂರಿನ ಜನತೆಗೆ ವಾಸ್ತವ ಗೊತ್ತಾಗಬೇಕು. ವಾಸ್ತವ ತಿಳಿದುಕೊಳ್ಳುವ ಹಕ್ಕು ನಮಗೆ ಇದೆ. ಭ್ರಷ್ಟಾಚಾರಕ್ಕೆ ತಿಲಾಂಜಲಿ ಇಡಲೇಬೇಕು. ಹೀಗಾಗಿ, ಸಿಂಧೂರಿ ಅವರ ನೇತೃತ್ವದಲ್ಲೇ ತನಿಖೆ ನಡೆಸಲಿ. ಈ ನಿಟ್ಟಿನಲ್ಲಿ ನಮ್ಮ ಆಂದೋಲನ ಆರಂಭವಾಗಿದ್ದು, ಬೆಂಬಲಿಸಿ’ ಎಂದು ಆಗ್ರಹಿಸಲಾಗಿದೆ.

‌ಇದಲ್ಲದೇ, ಫೇಸ್‌ಬುಕ್‌ನಲ್ಲಿ ಕೂಡ ಸಿಂಧೂರಿ ಪರ ಅಭಿಮಾನಿಗಳ ಗ್ರೂಪ್‌ಗಳು ಸೃಷ್ಟಿಯಾಗಿವೆ. ಅದರಲ್ಲೂ ಸಿಂಧೂರಿ ಅವರನ್ನು ಬೆಂಬಲಿಸಿ ಅಭಿಪ್ರಾಯಗಳನ್ನು ದಾಖಲಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.