ಬೆಂಗಳೂರು: ಜೆಇಇ ಫಲಿತಾಂಶ ಪ್ರಕಟವಾಗಿದ್ದು, ಶೇ 99.99ರಷ್ಟು ಅಂಕದೊಂದಿಗೆ ರಾಜ್ಯದ ಆರ್.ಶುಭನ್ ಅವರು ಟಾಪರ್ ಆಗಿದ್ದಾರೆ.
ನಗರದ ವಿದ್ಯಾರಣ್ಯಪುರದಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿರುವ ಅವರು ಐಐಟಿ ಬಾಂಬೆಯಲ್ಲಿ ಪ್ರವೇಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
‘ಇನ್ನೊಂದು ಪ್ರಯತ್ನ ಮಾಡಿ ಶೇ 100ರಷ್ಟು ಅಂಕ ಗಳಿಸುವ ಪ್ರಯತ್ನ ಮಾಡುವೆ, ಮೇ ತಿಂಗಳಲ್ಲಿ ನಡೆಯುವ ಜೆಇಇ ಅಡ್ವಾನ್ಡ್ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದೇನೆ. ಶಾಲೆಯ ಶಿಕ್ಷಕರು ನೀಡುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿದ್ದರಿಂದಲೇ ಇಂತಹ ಸಾಧನೆ ಮಾಡುವುದು ಸಾಧ್ಯವಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಇವರು ಖಾಸಗಿ ಆರೋಗ್ಯ ಸೇವೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜೆ.ರವಿಪ್ರಸಾದ್ ಮತ್ತು ಸುಧಾ ಗೋಪಾಲಕೃಷ್ಣನ್ ಅವರ ಪುತ್ರ.
ಜೆಇಇ: 3 ಟಾಪರ್ಗಳು ಅಲೆನ್ ವಿದ್ಯಾರ್ಥಿಗಳು
ಬೆಂಗಳೂರು: ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಟಾಪರ್ ಗಳಾಗಿರುವ 9 ಮಂದಿಯಲ್ಲಿ ಮೂವರು ಅಲೆನ್ ಕ್ಯಾರಿಯರ್ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿಗಳು ಎಂದು ಸಂಸ್ಥೆಯ ನಿರ್ದೇ ಶಕ ಬ್ರಜೇಶ್ ಮಹೇಶ್ವರಿ ತಿಳಿಸಿದ್ದಾರೆ.
ಶೇ 100ರಷ್ಟು ಅಂಕ ಗಳಿಸಿ ಟಾಪರ್ಗಳಾಗಿರುವ ಅಖಿಲ್ ಜೈನ್ ಮತ್ತು ಪಾರ್ಥ ದ್ವಿವೇದಿ ಅವರು ಅಲೆನ್ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದರೆ, ನಿಶಾಂತ್ ಅಗರ್ವಾಲ್ ಅವರು ಸಂಸ್ಥೆಯ ದೂರ ಶಿಕ್ಷಣ ಕಾರ್ಯಕ್ರಮದಲ್ಲಿ ವ್ಯಾಸಂಗ ಮಾಡಿದವರು.
ಇದರ ಜತೆಗೆ 10 ರಾಜ್ಯಗಳಲ್ಲಿನ ಟಾಪರ್ಗಳೂ ಅಲೆನ್ ವಿದ್ಯಾರ್ಥಿಗಳು ಎಂದು ನಿರ್ದೇಶಕರು ತಿಳಿಸಿದ್ದಾರೆ.
ವಿದ್ಯಾಜ್ಯೋತಿ ಕಾಲೇಜಿನ ಸಾಧನೆ: ಕೋಲಾರದ ಬಸವನತ್ತ ಗ್ರಾಮದಲ್ಲಿರುವ ವಿದ್ಯಾಜ್ಯೋತಿ ಪದವಿಪೂರ್ವ ಕಾಲೇಜಿನ ಫನೀಶ್ ಅವರು ಶೇ 98.6 ಅಂಕದೊಂದಿಗೆ ಜಿಲ್ಲೆಗೆ ಟಾಪರ್ ಆಗಿದ್ದಾರೆ. ಈ ಕಾಲೇಜಿನ 325 ಮಂದಿ ಪರೀಕ್ಷೆಗೆ ಕುಳಿತಿದ್ದರು. 25 ಮಂದಿಗೆ ಶೇ 90ಕ್ಕಿಂತ ಅಧಿಕ ಅಂಕ ಲಭಿಸಿದ್ದು, ಐಐಟಿ ಅಥವಾ ಎನ್ಐಟಿಯಲ್ಲಿ ಸೀಟು ಖಚಿತ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.