ADVERTISEMENT

ಆರ್‌ಎಸ್‌ಎಸ್‌, ಬಿಜೆಪಿಯವರು ದೇಶ ಬಿಟ್ಟು ತೊಲಗಲಿ: ಮರಿಯಂ ಧವಳೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 20:45 IST
Last Updated 3 ಆಗಸ್ಟ್ 2022, 20:45 IST
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಬುಧವಾರ ಬೃಹತ್ ರ‍್ಯಾಲಿ ನಡೆಯಿತು
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಬುಧವಾರ ಬೃಹತ್ ರ‍್ಯಾಲಿ ನಡೆಯಿತು   

ಕಲಬುರಗಿ: ‘ಜಾತಿ, ಧರ್ಮದ ಹೆಸರಲ್ಲಿ ಗಲಭೆ ಉಂಟು ಮಾಡುತ್ತಿರುವ ಆರ್‌ಎಸ್‌ಎಸ್‌, ಬಿಜೆಪಿಯವರು ದೇಶ ಬಿಟ್ಟು ತೊಲಗಬೇಕು. ಇಲ್ಲದಿದ್ದರೆ, ಮಣ್ಣಿನಲ್ಲಿ ಹೂತು ಹಾಕುತ್ತೇವೆ’ ಎಂದುಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮರಿಯಂ ಧವಳೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಬುಧವಾರ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 11ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು,‘ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರ್‌ಎಸ್‌ಎಸ್‌ ಮತ್ತು ಮುಸ್ಲಿಂ ಲೀಗ್‌ನವರು ಗಲಾಟೆ ಮಾಡಿ, ಬ್ರಿಟಿಷರಿಗೆ ಸಹಕರಿಸಿದ್ದರು’ಎಂದು
ಆರೋಪಿಸಿದರು.

‌‘ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದವರು ಇವತ್ತು ಅಧಿಕಾರಕ್ಕೆ ಬಂದು ದೇಶವನ್ನು ಮಾರಾಟ ಮಾಡಿ, ನಮ್ಮ ಬದುಕಿಗೆ ಕೊಳ್ಳಿ ಇಟಿದ್ದಾರೆ. ಅವರ ವಿರುದ್ಧ ನಾವು ಕ್ವಿಟ್ ಇಂಡಿಯಾ ಮಾದರಿಯಲ್ಲಿ ಹೋರಾಡಬೇಕಿದೆ’ ಎಂದರು.

ADVERTISEMENT

‘ಉತ್ತಮ ಆಡಳಿತ ನಡೆಸುವಂತೆ ಜನರು ಮತ ಹಾಕಿದ್ದಾರೆ ಹೊರತು ದೇಶ ಮತ್ತು ದೇಶದ ಸಂಪತ್ತನ್ನು ಅಂಬಾನಿ, ಅದಾನಿಯಂತಹ ಕಾರ್ಪೊರೇಟ್‌ಗಳಿಗೆ ಮಾರಾಟ ಮಾಡಲು ಅಲ್ಲ’ ಎಂದು ಅವರು ಟೀಕಿಸಿದರು.

‘ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೇ ಹೊರತು ಮಹಿಳೆಯರಿಗೆ ಅಲ್ಲ. ಮಹಿಳೆಯರಿಗೆ ಆಸ್ತಿಯ ಹಕ್ಕು ಸಿಕ್ಕಿಲ್ಲ. ಶೇ 40ಕ್ಕೂ ಅಧಿಕ ಮಹಿಳೆಯರು ಇನ್ನೂ ಅನಕ್ಷರಸ್ಥರು ಆಗಿದ್ದಾರೆ. ಘನತೆಯಿಂದ ಬದುಕುವ ವಾತಾವರಣವೇ ಇಲ್ಲದ ಈ ಹೊತ್ತಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿದರೆ ಏನು ಫಲ’ ಎಂದು ಅವರು ಪ್ರಶ್ನಿಸಿದರು.

ಸಂಘಟನೆಯ ರಾಜ್ಯ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಬಾಳಿ, ರಾಷ್ಟ್ರೀಯ ಕಾರ್ಯದರ್ಶಿ ಕನೀಜ್ ಫಾತಿಮಾ, ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಇತರರು ಇದ್ದರು. ಇದಕ್ಕೂ ಮುನ್ನ ನಗರದ ಎಪಿಎಂಸಿ ಗಂಜ್‌ನಿಂದ ಸಂಘಟನೆಯ ನೇತೃತ್ವದಲ್ಲಿ ಮೆರವಣಿಗೆನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.