ಕಲಬುರ್ಗಿ: ರಾಜ್ಯ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ‘ಡಿ’ ದರ್ಜೆ ನೌಕರರ ನೇಮಕಾತಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಕುರಿತು, ನಗರದಲ್ಲಿ ಗುರುವಾರ ನಡೆದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಭೆಯಲ್ಲಿ ನಿರ್ಧರಿಸಲಾಯಿತು.
ಆಯೋಗದ ಅಧ್ಯಕ್ಷ ಅಂತೋನಿ ಸೆಬಾಸ್ಟಿಯನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಹೈದರಾಬಾದ್ ಕರ್ನಾಟಕ ಭಾಗದ ಬಹುಪಾಲು ಶಾಲೆಗಳ ಮಕ್ಕಳು ಶೌಚಾಲಯ ಸ್ವಚ್ಛತೆಯ ಸಮಸ್ಯೆಯನ್ನೇ ಮುಂದಿಟ್ಟರು.
ಇದಕ್ಕೆ ಸಮಜಾಯಿಷಿ ನೀಡಿದ ಆಯಾ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ‘ಶಾಲೆಯಲ್ಲಿ ಶೌಚಾಲಯ ಸ್ವಚ್ಛ ಮಾಡಲು ಯಾರೂ ತಯಾರಿಲ್ಲ. ಕನಿಷ್ಠ ವಾರಕ್ಕೊಮ್ಮೆ ಸ್ವಚ್ಛ ಮಾಡದಿದ್ದರೆ ಅವಗಳನ್ನು ಬಳಸಲು ಆಗುವುದಿಲ್ಲ. ಶಾಲೆ ಶಿಕ್ಷಕರೇ ಹೊರಗಿನ ವ್ಯಕ್ತಿಗಳಿಗೆ ಹಣ ಕೊಟ್ಟು ಸ್ವಚ್ಛ ಮಾಡಿಸುತ್ತಾರೆ. ಇದರಿಂದ ಶೌಚಾಲಯ ಇದ್ದರೂ ಮಕ್ಕಳು ಬಳಸಲು ಇಷ್ಟಪಡುತ್ತಿಲ್ಲ’ ಎಂದು ಮನವರಿಕೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಂತೋನಿ ಸೆಬಾಸ್ಟಿಯನ್ ಹಾಗೂ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್ ಅವರು, ‘ಪ್ರಾಥಮಿಕ ಶಾಲೆಗಳಲ್ಲಿ ‘ಡಿ’ ದರ್ಜೆ ಹುದ್ದೆಗಳನ್ನು ಸೃಷ್ಟಿಸುವುದೇ ಇದಕ್ಕೆ ಪರಿಹಾರ. ಆಯೋಗದ ಮೂಲಕವೇ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.