ಬೆಂಗಳೂರು: ಹೊಸ ಉದ್ಯೋಗ ನೀತಿಯಲ್ಲಿ ಹೆಚ್ಚಿನ ಉದ್ಯೋಗಗಳ ಸೃಷ್ಟಿಗೆ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದು, ಈ ನೀತಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೆ ಮಂಡಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ಈ ನೀತಿಯು ಕೌಶಲ್ಯಗಳಿಂದ ಕೂಡಿದ ಮಾನವ ಸಂಪನ್ಮೂಲದ ಸೃಜನೆಗೆ ಪೂರಕವಾಗಿರಬೇಕು. ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಬೇಕು ಹಾಗೂ ಉದ್ಯಮ ವಲಯದಲ್ಲಿ ಬೇಡಿಕೆಯಲ್ಲಿರುವ ಕೌಶಲ್ಯ ತರಬೇತಿಗೂ ಆದ್ಯತೆ ನೀಡಬೇಕು ಎಂದು ಉದ್ಯೋಗ ನೀತಿ ಕುರಿತು ಮಂಗಳವಾರ ಹಿರಿಯ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಸೃಷ್ಟಿಯಾಗುವ ಉದ್ಯೋಗಾವಕಾಶಗಳು, ಉದ್ಯೋಗ ಪಡೆದವರ ದತ್ತಾಂಶ ಸಂಗ್ರಹಕ್ಕೆ ವ್ಯವಸ್ಥೆ ರೂಪಿಸಬೇಕು. ಅಲ್ಲದೆ, ರಾಜ್ಯ ಮಟ್ಟದ ಒಪ್ಪಿಗೆ ಸಮಿತಿಯಲ್ಲಿ ಅನುಮೋದನೆಯಾದ ಯೋಜನೆಗಳು ನಿಗದಿತ ಅವಧಿಯಲ್ಲಿ ಜಾರಿಗೊಂಡಿವೆಯೇ? ಇಂತಹ ಕೈಗಾರಿಕೋದ್ಯಮಗಳು ತಮಗೆ ಹಂಚಿಕೆಯಾಗಿರುವ ಭೂಮಿಯನ್ನು ಬಳಸಿಕೊಂಡಿವೆಯೇ ಎಂಬ ಬಗ್ಗೆ ವರದಿ ಸಲ್ಲಿಸಬೇಕು ಮತ್ತು ನಿಗದಿತ ಅವಧಿಯಲ್ಲಿ ಜಾರಿಯಾಗದ ಯೋಜನೆಗಳಿಗೆ ಹಂಚಿಕೆಯಾದ ಭೂಮಿಯನ್ನು ಹಿಂಪಡೆಯಬೇಕು ಎಂದು ಅವರು ಕೈಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶಾಲಾ ಹಂತದಲ್ಲಿಯೇ ತಾಂತ್ರಿಕ ತರಬೇತಿ ನೀಡುವ ಟೆಕ್ನಿಕಲ್ ಸ್ಕೂಲ್ಗಳನ್ನು ಸ್ಥಾಪಿಸುವಂತೆಯೂ ಸಲಹೆ ನೀಡಿದ ಅವರು, ಮೊದಲ ಹಂತದಲ್ಲಿಯೇ ಪ್ರಾಯೋಗಿಕವಾಗಿ ತಲಾ ನಾಲ್ಕು ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಈ ಶಿಕ್ಷಣ ನೀಡುವಂತೆ ನಿರ್ದೇಶನ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.