ಬೆಂಗಳೂರು: ದೆಹಲಿಯಿಂದ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದಿಳಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ದೆಹಲಿಯು ಹೆಚ್ಚಿನ ಅಪಾಯ ಸಂಭವಿಸಬಹುದಾದ (ಹೈ ರಿಸ್ಕ್) ವಲಯದಲ್ಲಿದೆ. ಇಂತಹ ಪ್ರದೇಶದಿಂದ ಬಂದವರು ಕಡ್ಡಾಯವಾಗಿ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ರಾಜ್ಯ ಸರ್ಕಾರದ ಕ್ವಾರಂಟೈನ್ ಮಾರ್ಗಸೂಚಿಯಲ್ಲಿದೆ.
ಕ್ವಾರಂಟೈನ್ಗೆ ಒಳಗಾಗದೇ ಇರುವುದಕ್ಕೆ ಪ್ರತಿಕ್ರಿಯಿಸಿದ ಸದಾನಂದಗೌಡರು, ‘ನಾನು ಫಾರ್ಮಾ ಸಚಿವನೂ ಹೌದು. ಔಷಧ ಪೂರೈಕೆಯು ಅಗತ್ಯ ಸೇವೆಯಡಿ ಬರುತ್ತಿದ್ದು, ಎಲ್ಲ ರಾಜ್ಯಗಳಿಗೆ ಔಷಧಗಳನ್ನು ಪೂರೈಸಬೇಕಾಗುತ್ತದೆ. ನಾನು ಕ್ವಾರಂಟೈನ್ ಒಳಗಾದರೆ ಈ ಕೆಲಸ ಮಾಡಲು ತೊಂದರೆಯಾಗುತ್ತದೆ’ ಎಂದರು.
‘ದೇಶದೆಲ್ಲೆಡೆ ಔಷಧ ಲಭ್ಯವಾಗದಿದ್ದರೆ ಅದು ಸರ್ಕಾರದ ವೈಫಲ್ಯ ಎನಿಸಿಕೊಳ್ಳುತ್ತದೆ. ಔಷಧ ಖಾತೆಯ ಸಚಿವನಾಗಿ ದೇಶದ ಪ್ರತಿ ಮೂಲೆಗೂ ನಾನು ಹೋಗಬೇಕಾಗುತ್ತದೆ. ಔಷಧ ಸಂಗ್ರಹದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ’ ಎಂದೂ ಅವರು ಸಮರ್ಥಿಸಿಕೊಂಡರು.
ಕೋವಿಡ್ 19ಗೆ ಸಂಬಂಧಿಸಿದಂತೆ ಸರ್ಕಾರದ ವಕ್ತಾರರಾಗಿರುವ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಸದಾನಂದಗೌಡರ ನಡೆಯನ್ನು ಸಮರ್ಥಿಸಿದ್ದು, ‘ಔಷಧ ಸಚಿವಾಲಯದ ಹೊಣೆ ಹೊತ್ತಿರುವ ಸದಾನಂದಗೌಡರು, ಕ್ವಾರಂಟೈನ್ ಮಾರ್ಗಸೂಚಿಗಳಿಂದ ಹೊರತಾಗಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.