ಸಕಲೇಶಪುರ (ಹಾಸನ): ತಾಲ್ಲೂಕಿನ ಕಾಡುಮನೆ ಸಮೀಪದ ಮಣಿಭಿಕ್ತಿ ರಕ್ಷಿತ ಅರಣ್ಯದಲ್ಲಿ ಗುರುವಾರ ಮಧ್ಯಾಹ್ನ ಹೊತ್ತಿಕೊಂಡಿದ್ದ ಕಾಡ್ಗಿಚ್ಚು ಆರಿಸಲು ಹೋಗಿದ್ದ ಅರಣ್ಯ ಇಲಾಖೆಯ ನಾಲ್ವರು ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ
ಚಿಂತಾಜನಕವಾಗಿದೆ.
ಕಾಡುಮನೆ ಸಮೀಪದ ಟೀ ಎಸ್ಟೇಟ್ನಿಂದ ಸುಮಾರು 10 ಕಿ.ಮೀ ದೂರದಲ್ಲಿ ಘಟನೆ ನಡೆದಿದೆ.
‘ಫಾರೆಸ್ಟರ್’ ಮಂಜುನಾಥ್ ಮತ್ತು ‘ಗಾರ್ಡ್’ ಸುಂದರೇಶ್ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಅವರೊಂದಿಗಿದ್ದ ‘ವಾಚರ್’ಗಳಾದ ತುಂಗೇಶ್ ಹಾಗೂ ಮಹೇಶ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಿವರ: ಮುಖ, ಕೈಗೆ ಬೆಂಕಿ ತಗುಲಿ ಗಾಯಗೊಂಡಿದ್ದ ತುಂಗೇಶ್ ನೋವಿನಲ್ಲಿಯೇ 10 ಕಿ.ಮೀ ನಡೆದು ಕಾಡು
ಮನೆ ಆಸ್ಪತ್ರೆಗೆ ತೆರಳಿ, ಅಲ್ಲಿಂದಲೇ ಅಧಿಕಾರಿಗಳಿಗೆ ಮಾಹಿತಿಕೊಟ್ಟರು. ಅವಘಡ ನಡೆದ ಸ್ಥಳದಲ್ಲಿ ಮೊಬೈಲ್ ನೆಟ್ವರ್ಕ್ ಇರಲಿಲ್ಲ.
ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸ್ ಕಾನ್ಸ್ಟೆಬಲ್ ನಂದೀಶ್, ಹೆಬ್ಬಸಾಲೆ ಮುಖಂಡ ಮೇಘರಾಜ್ ಧಾವಿಸಿ, ಗಾಯಾಳುಗಳಾದ ಮಂಜುನಾಥ್, ಸುಂದರೇಶ್ ಹಾಗೂ ಮಹೇಶ್ ಅವರನ್ನು ಸ್ಟ್ರೆಚರ್ನಲ್ಲಿ ಮಲಗಿಸಿ ನಡೆದುಕೊಂಡೇ ಮುಖ್ಯರಸ್ತೆಗೆ ಬಂದು, ನಂತರ ಆಂಬುಲೆನ್ಸ್ ಮೂಲಕ ಪಟ್ಟಣದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಾ. ಮಧುಸೂದನ್, ಡಾ. ಸಂಧ್ಯಾ ಅವರು ತುರ್ತು ಚಿಕಿತ್ಸೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.