ADVERTISEMENT

ಆರ್.ವಿಶ್ವೇಶ್ವರನ್‌ಗೆ ‘ಸಂಗೀತ ನಾಟಕ ಅಕಾಡೆಮಿ ರತ್ನ’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 15:22 IST
Last Updated 28 ಫೆಬ್ರುವರಿ 2024, 15:22 IST
   

ನವದೆಹಲಿ: ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ‘ಅಕಾಡೆಮಿ ರತ್ನ (ಫೆಲೋಶಿಪ್‌)’ ಪ್ರಶಸ್ತಿಗೆ ಮೈಸೂರಿನ ಹಿರಿಯ ವೀಣಾವಾದಕ ಆರ್. ವಿಶ್ವೇಶ್ವರನ್‌ ಅವರನ್ನು ಆಯ್ಕೆ ಮಾಡಲಾಗಿದೆ. 

ಅಕಾಡೆಮಿ ರತ್ನ, 2022 ಮತ್ತು 2023ನೇ ಸಾಲಿನ ಅಕಾಡೆಮಿ ಪುರಸ್ಕಾರ ಹಾಗೂ 2022 ಮತ್ತು 2023ನೇ ಸಾಲಿನ ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರಗಳ ವಿಜೇತರ ಹೆಸರನ್ನು ಮಂಗಳವಾರ ಪ್ರಕಟಿಸಲಾಗಿದೆ. ಅಕಾಡೆಮಿ ರತ್ನ ಪ್ರಶಸ್ತಿಯು ₹3 ಲಕ್ಷ ನಗದು, ಅಕಾಡೆಮಿ ಪುರಸ್ಕಾರವು ₹1 ಲಕ್ಷ ನಗದು ಹಾಗೂ ಯುವ ಪುರಸ್ಕಾರವು ₹25 ಸಾವಿರ ನಗದನ್ನು ಒಳಗೊಂಡಿದೆ. ಯುವ ಪುರಸ್ಕಾರವನ್ನು ಅಕಾಡೆಮಿಯ ಅಧ್ಯಕ್ಷರು ಶೀಘ್ರ ಪ್ರದಾನ ಮಾಡಲಿದ್ದಾರೆ. ಅಕಾಡೆಮಿ ರತ್ನ ಹಾಗೂ ಅಕಾಡೆಮಿ ಪುರಸ್ಕಾರವನ್ನು ರಾಷ್ಟ್ರಪತಿ ಅವರು ಪ್ರದಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ. 

2022ನೇ ಸಾಲಿನ ಅಕಾಡೆಮಿ ಪುರಸ್ಕಾರಕ್ಕೆ ಬೆಂಗಳೂರಿನ ವೀಣಾವಾದಕಿ ಜಯಂತಿ ಕುಮರೇಶ್‌, ಬೆಂಗಳೂರಿನ ಕರ್ನಾಟಕ ಸಂಗೀತ ಗಾಯಕಿ ಪುಸ್ತಕಂ ರಮಾ, 2023ನೇ ಸಾಲಿನ ಪ್ರಶಸ್ತಿಗೆ ಬೆಂಗಳೂರಿನ ವಯೊಲಿನ್‌ ವಾದಕ ಎಚ್‌.ಕೆ.ವೆಂಕಟರಾಮ್‌, ಕುಮಾರ ಗಂಧರ್ವ ಅವರ ಪುತ್ರಿಯಾದ ಪ್ರಸಿದ್ಧ ಗಾಯಕಿ ಕಲಾಪಿನಿ ಕೊಂಕಾಲಿ (ಸದ್ಯ ಮುಂಬೈಯಲ್ಲಿ ನೆಲೆಸಿದ್ದಾರೆ), ಭರತನಾಟ್ಯ ಹಾಗೂ ಕಥಕ್‌ ನೃತ್ಯಪಟುಗಳಾದ ನಿರುಪಮಾ ಮತ್ತು ರಾಜೇಂದ್ರ ಆಯ್ಕೆಯಾಗಿದ್ದಾರೆ. 

ADVERTISEMENT

2022ನೇ ಸಾಲಿನ ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರಕ್ಕೆ ಲೇಖಕ ಬೇಲೂರು ರಘುನಂದನ್‌, ವೀಣಾವಾದಕಿ ಸಹನಾ ಎಸ್‌.ವಿ ಹಾಗೂ 2023ನೇ ಸಾಲಿನ ಪುರಸ್ಕಾರಕ್ಕೆ ಗಾಯಕ ಎಸ್.ಆರ್. ವಿನಯ್‌ ಶರ್ವಾ ಅವರನ್ನು ಆಯ್ಕೆ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.