ಬೆಂಗಳೂರು: ರಾಜ್ಯದಲ್ಲಿ ಮಾನವ-ಚಿರತೆ ಮಧ್ಯದ ಸಂಘರ್ಷ ತಡೆಯಲು ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ ಹಲವು ಸೂತ್ರಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
1972ರ ನಂತರದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತಿತರ ಕಟ್ಟಳೆಗಳಿಂದ ಕೆಲ ವನ್ಯಜೀವಿಗಳ ಪ್ರಭೇದ ಹೆಚ್ಚಾಗಿವೆ. ಅಧ್ಯಯನದ ಪ್ರಕಾರ ರಾಜ್ಯದಲ್ಲಿ 2,500 ಚಿರತೆಗಳಿವೆ. 29 ಜಿಲ್ಲೆಗಳಲ್ಲಿ ಚಿರತೆಗಳ ಉಪಸ್ಥಿತಿ ದಾಖಲಾಗಿವೆ. ಇವು ದೊಡ್ಡ ಕಾಡು, ಕುರುಚಲು ಕಾಡು, ಹುಲ್ಲುಗಾವಲುಗಳಲ್ಲೂ ಜೀವಿಸುತ್ತವೆ. ಒಂದು ಚಿರತೆಗೆ ದಿನಕ್ಕೆ ಸರಾಸರಿ 4 ಕೆ.ಜಿ. ಆಹಾರದ ಅವಶ್ಯಕತೆ ಇರುತ್ತದೆ. ಮೊಲ, ಹಂದಿ, ಮೇಕೆ, ಕುರಿ, ನಾಯಿಗಳನ್ನು ತಿನ್ನುತ್ತವೆ. ಅವು ಜೀವಿಸುವ ಸ್ಥಳ, ಸೇವಿಸುವ ಆಹಾರದ ಕಾರಣಕ್ಕಾಗಿ ಹೆಚ್ಚಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ವಿವರಿಸಿದ್ದಾರೆ.
ರಾಜ್ಯದ ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಕೊಪ್ಪಳ, ಬಳ್ಳಾರಿ, ಕೋಲಾರ ಜಿಲ್ಲೆಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅವುಗಳ ಆವಾಸಸ್ಥಾನಕ್ಕೆ ಧಕ್ಕೆಯಾಗುತ್ತಿದೆ. ಇದರಿಂದ ಅವು ಕಬ್ಬಿನಗದ್ದೆ, ಜೋಳದ ಹೊಲ, ನೀಲಗಿರಿ ತೋಪುಗಳಿಗೆ ತಮ್ಮ ನೆಲೆ ಬದಲಾಯಿಸುತ್ತಿವೆ. ಇದರಿಂದ ರಾಜ್ಯದ 700ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮಾನವ–ಚಿರತೆಸಂಘರ್ಷಕ್ಕೆ ದಾರಿಮಾಡಿ
ಕೊಟ್ಟಿದೆ ಎಂದು ವಿಶ್ಲೇಷಿಸಿದ್ದಾರೆ.
ಮಾನವ–ವನ್ಯಜೀವಿ ಸಂಘರ್ಷ ತಡೆಯಲು ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗ ತೆರೆಯಬೇಕು. ಗಾಯಗೊಂಡ ಚಿರತೆಗಳ ಆರೈಕೆಗೆ ಕನಿಷ್ಠ ಮೂರು ಪನರ್ವಸತಿ ಕೇಂದ್ರಗಳನ್ನು ತೆರೆಯಬೇಕು. ಮೃತಪಟ್ಟ ಕುಟುಂಬಗಳಿಗೆ ₹ 15 ಲಕ್ಷ ಹಾಗೂ ನೀಡುವ ಮಾಸಾಶನ ₹ 6 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.