ADVERTISEMENT

ಪರಿಶಿಷ್ಟ ಜಾತಿ ಬಾಲಕನಿಗೆ ದಂಡ ವಿಧಿಸಿದ ಘಟನೆ: ಉಳ್ಳೇರಹಳ್ಳಿಗೆ ಅಧಿಕಾರಿಗಳ ದಂಡು

ಪರಿಶಿಷ್ಟ ಬಾಲಕನ ಕುಟುಂಬಕ್ಕೆ ನಿವೇಶನ ಮಂಜೂರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 21:10 IST
Last Updated 21 ಸೆಪ್ಟೆಂಬರ್ 2022, 21:10 IST
ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಗ್ರಾಮಸ್ಥರು, ಅಧಿಕಾರಿಗಳು, ಪೊಲೀಸರು, ದಲಿತ ಸಂಘಟನೆ ಮುಖಂಡರು ಹಾಗೂ ಬಾಲಕನ ಕುಟುಂಬದವರು ಪಾಲ್ಗೊಂಡಿದ್ದರು
ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಗ್ರಾಮಸ್ಥರು, ಅಧಿಕಾರಿಗಳು, ಪೊಲೀಸರು, ದಲಿತ ಸಂಘಟನೆ ಮುಖಂಡರು ಹಾಗೂ ಬಾಲಕನ ಕುಟುಂಬದವರು ಪಾಲ್ಗೊಂಡಿದ್ದರು   

ಮಾಲೂರು (ಕೋಲಾರ ಜಿಲ್ಲೆ): ದೇವರ ಗುಜ್ಜುಕೋಲು ಮುಟ್ಟಿದ ಪರಿಶಿಷ್ಟ ಜಾತಿ ಬಾಲಕನಿಗೆ ದಂಡ ವಿಧಿಸಿದ ಘಟನೆ ಬಹಿರಂಗವಾಗುತ್ತಿದ್ದಂತೆಯೇ ರಾಜಕಾರಣಿಗಳು ಮತ್ತು ಹಿರಿಯ ಅಧಿ ಕಾರಿಗಳ ದಂಡುಬುಧವಾರ ಉಳ್ಳೇರಹಳ್ಳಿಗೆ ಧಾವಿಸಿದೆ.ಸಂತ್ರಸ್ತ ಕುಟುಂಬಕ್ಕೆ ನೆರವಿನ ಮಹಾಪೂರ ಹರಿದು ಬಂದಿದೆ.

ಸ್ಥಳೀಯ ಪಂಚಾಯಿತಿಯಿಂದ ಕುಟುಂಬಕ್ಕೆ ನಿವೇಶನ ದಾಖಲೆ ಪತ್ರ ಕೊಟ್ಟು, ಮನೆ ನಿರ್ಮಿಸಿ ಕೊಡುವ ಭರವಸೆ ನೀಡಲಾಯಿತು. ಬಾಲಕನ ತಾಯಿ ಶೋಭಾ ಅವರಿಗೆ ಹೊರಗುತ್ತಿಗೆ ಯಲ್ಲಿಸರ್ಕಾರಿ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ, ಬಾಲಕನ ವಿದ್ಯಾಭ್ಯಾಸದ ಖರ್ಚು ಭರಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿತು. ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆ ₹25 ಸಾವಿರ ಮತ್ತು ಸಂಸದ ಮುನಿಸ್ವಾಮಿ ₹50 ಸಾವಿರ ನೀಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ್‌ ಅಧಿಕಾರಿಗಳ ತಂಡ ದೊಂದಿಗೆ ಬೆಳಗ್ಗೆಯೇ ಗ್ರಾಮಕ್ಕೆ ತೆರಳಿ ಕುಟುಂಬಕ್ಕೆ ಧೈರ್ಯ ತುಂಬಿದರು. ಈ ಕುಟುಂಬಕ್ಕೆ ಯಾವುದೇ ತೊಂದರೆ ನೀಡದಂತೆ ಗ್ರಾಮಸ್ಥರಿಗೆ ಎಚ್ಚರಿಕೆಯನ್ನೂ ನೀಡಿ ಬಂದರು.

ADVERTISEMENT

‘ಪ್ರಜಾವಾಣಿ’ ವರದಿ ಪ್ರಸ್ತಾಪ

ಪರಿಶಿಷ್ಟ ಜಾತಿ ಬಾಲಕನ ಕುಟುಂಬಕ್ಕೆ ದಂಡ ವಿಧಿಸಿದ ಘಟನೆ ಹಿನ್ನೆಲೆಯಲ್ಲಿಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ‘ಪ್ರಜಾವಾಣಿ’ ವರದಿ ಪ್ರಸ್ತಾಪವಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣಹಾಗೂ ಜಾಗೃತಿ ಸಮಿತಿ ಸಭೆಯಲ್ಲಿ ಸದಸ್ಯರು ‘ಪ್ರಜಾವಾಣಿ’ ವರದಿ ಪ್ರಸ್ತಾಪಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಆರೋಪಿಗಳನ್ನು ಕೂಡಲೇ ಬಂಧಿಸಲು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.