ADVERTISEMENT

‘ಮಾನಸಿಕ ಭಯೋತ್ಪಾದಕರಿಂದ ಮಹಿಳೆಯರಿಗೆ ಪ್ರವೇಶ ನಿಷೇಧ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:15 IST
Last Updated 20 ನವೆಂಬರ್ 2018, 20:15 IST

ಪಾಂಡವಪುರ: ‘ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವವರು ಮಾನಸಿಕ ಭಯೋತ್ಪಾದಕರು’ ಎಂದು ಸಾಣೇಹಳ್ಳಿ ತರಳಬಾಳು ಬೃಹನ್ಮಠದ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದ ‘ಶಿವ ಸಂಚಾರ’ ನಾಟಕೋತ್ಸವದ ಸಂವಾದದಲ್ಲಿ ಮಾತನಾಡಿದರು.

‘ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸುವಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ನಿರಾಕರಿಸಿರುವುದು ಸರಿಯಲ್ಲ. ಜನರು ಕೂಡ ಶಬರಿಮಲೆಗೆ ಹೋಗುವುದನ್ನು ನಿಲ್ಲಿಸಿ ಅಜ್ಞಾನದಿಂದ ದೂರವಿರಬೇಕಿದೆ’ ಎಂದು ಹೇಳಿದರು.

ADVERTISEMENT

‘ಪಟ್ಟಭದ್ರರು ಧರ್ಮವನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಲಿಂಗಾಯಿತ ಧರ್ಮವು ವಿಶ್ವಧರ್ಮವಾಗಿದೆ. ಈ ಮೊದಲು ಇದ್ದ ಶೈವ ಪಂಥವು ವೀರಶೈವ ಪಂಥವಾಗಿ ರೂಪುಗೊಂಡಿತು. ನಂತರ ಇದು ಪರಿಷ್ಕರಣೆಗೊಂಡು 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಬಸವಪಂಥದ ಲಿಂಗಾಯತ ಧರ್ಮವಾಗಿ ರೂಪುಗೊಂಡಿತು. ವಿಗ್ರಹಾರಾಧನೆಯನ್ನು ಬಸವಣ್ಣ ವಿರೋಧಿಸಿದರು. ಇಂತಹ ವಿಶ್ವಧರ್ಮಕ್ಕೆ ಒಂದು ಮಾನ್ಯತೆ ಕಲ್ಪಿಸಲು ಹೊರಟಾಗ (ಹಿಂದಿನ ಸರ್ಕಾರ) ಇದೇಪಟ್ಟಭದ್ರ ಹಿತಾಶಕ್ತಿಗಳು ಇದರ ವಿರುದ್ಧ ಧ್ವನಿಎತ್ತಿ ಧಮನಮಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಂಬೇಡ್ಕರ್‌ ಅವರಿಂದ ರಚಿಸಲ್ಪಟ್ಟ ಭಾರತ ಸಂವಿಧಾನವು ಶ್ರೇಷ್ಠವಾಗಿದೆ. ಜಗತ್ತಿನಲ್ಲಿಯೇ ಮನ್ನಣೆ– ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಕೆಲವರು ಸಂವಿಧಾನದ ವಿರುದ್ಧ ಅಪಸ್ವರ ಎತ್ತಿ ಬದಲಾಯಿಸಬೇಕು ಎನ್ನುತ್ತಿರುವುದು ಸರಿಯಲ್ಲ. ಸಂವಿಧಾನ ಬದಲಾವಣೆ ಅಸಾಧ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.