ADVERTISEMENT

ಲಿಂಗಾಯತರಿಗೆ ಪ್ರಮುಖ ಹುದ್ದೆ: ಸಿ.ಎಂ. ಜೊತೆ ಚರ್ಚೆ- ಶಾಮನೂರು ಶಿವಶಂಕರಪ್ಪ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 14:24 IST
Last Updated 2 ಅಕ್ಟೋಬರ್ 2023, 14:24 IST
   

ದಾವಣಗೆರೆ: ‘ಯಾವ ಸಮುದಾಯದ ಅಧಿಕಾರಿಗಳನ್ನು ಎಲ್ಲೆಲ್ಲಿ ನಿಯೋಜಿಸಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಒಬ್ಬರನ್ನೂ ಜಿಲ್ಲಾಧಿಕಾರಿಯಾಗಿ ನೇಮಿಸಿಲ್ಲ. ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

‘ವೀರಶೈವ ಲಿಂಗಾಯತ ಸಮುದಾಯದ ಏಳು ಜನರಿಗೆ ಸಚಿವ ಸ್ಥಾನ ನೀಡಿದ್ದಾರೆ. ಅದರ ಬಗ್ಗೆ‌ ನಮ್ಮ ತಕರಾರು ಇಲ್ಲ. ಸಮುದಾಯದ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ಅನ್ಯಾಯ ಆಗಿರುವುದು ಸತ್ಯ. ಅವರಿಗೆ ಪ್ರಮುಖ ಹುದ್ದೆಗಳನ್ನು (ಕೀ ಪೋಸ್ಟ್‌) ನೀಡಿಲ್ಲ. ಅದಕ್ಕೆಂದೇ ಈ ವಿಷಯದ ಬಗ್ಗೆ ರಾಜ್ಯದಾದ್ಯಂತ ಚರ್ಚೆ ಆಗುತ್ತಿದೆ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ನಾನು ಎಚ್.ವಿಶ್ವನಾಥ್ ತರಹ ಯಾರಿಗೋ ಬೆಣ್ಣೆ ಹಚ್ಚಿ, ಮಸ್ಕಾ ಹೊಡೆದು ಎಂಎಲ್‌ಸಿ ಆಗಿಲ್ಲ. 7 ಸಲ ಜನರಿಂದ ಆಯ್ಕೆಯಾಗಿ ಶಾಸಕನಾಗಿರುವೆ. ನಾನು ಮಾತನಾಡಿದ್ದು, ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳ ಬಗ್ಗೆ. ಸಚಿವ ಸ್ಥಾನದ ಬಗ್ಗೆ ಹೇಳಿಕೆ ನೀಡಿರುವ ಅವನನ್ನು ಹುಚ್ಚಾಸ್ಪತ್ರೆಗೆ ಕಳುಹಿಸಿ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ನೀಡದ್ದರಿಂದ, ಅವರ ಪಾಡು ನಾಯಿ ಪಾಡಾಗಿದೆ ಎಂದು ಶಾಮನೂರು ಶಿವಶಂಕರಪ್ಪ ಕಳೆದ ವಾರ ಬೆಂಗಳೂರಿನಲ್ಲಿ ನಡೆದಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.